ಲಕ್ಷ್ಮೇಶ್ವರ: ತಾಲ್ಲೂಕಿನ ಶಿಗ್ಲಿಯ ಗ್ರಾಮ ಭಾರತಿ ಶಿಕ್ಷಣ ಸಮಿತಿಯ ಎಸ್.ಎಸ್. ಕೂಡ್ಲಮಠ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಶ್ರೀಮತಿ ಜಾನಕಿಬಾಯಿ ರಜಪೂತ ಕನ್ನಡ ಪ್ರಾಥಮಿಕ ಶಾಲೆ, ಜಿಬಿಎಸ್ಎಸ್ ಆಂಗ್ಲ ಮಾಧ್ಯಮ ಶಾಲೆ ಪ್ರಾಥಮಿಕ ಶಾಲೆ, ಪುಟ್ಟಯ್ಯ ಸಂಗಯ್ಯ ಕೂಡ್ಲಮಠ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಎಸ್.ಎಸ್. ಕೂಡ್ಲಮಠ ಮಾಧ್ಯಮಿಕ ಶಾಲೆಗಳ ವಜ್ರಮಹೋತ್ಸವ ಸಮಾರಂಭ ಜನವರಿ 27ರಂದು ಜರುಗಲಿದೆ.
ಈ ಕುರಿತು ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಸೋಮಣ್ಣ ಡಾಣಗಲ್ಲ ಮಾತನಾಡಿ ‘1964ರಲ್ಲಿ ಆರಂಭವಾದ ಎಸ್.ಎಸ್. ಕೂಡ್ಲಮಠ ಪ್ರೌಢ ಶಾಲೆ ಈವರೆಗೆ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದೆ. ಇಲ್ಲಿನ ಕಲಿತ ಮಕ್ಕಳು ವೈದ್ಯರು, ಎಂಜಿನಿಯರುಗಳು, ಐಎಎಸ್, ಕೆಎಎಸ್ನಂಥ ಉನ್ನು ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಶಾಲೆಯ ಮಕ್ಕಳು ಮೊದಲಿನಿಂದಲೂ ಕ್ರೀಡೆಯಲ್ಲಿ ಸಾಧನೆ ಮಾಡುತ್ತಲೇ ಇದ್ದಾರೆ. ಅತ್ಯಂತ ಕಟು ಸವಾಲುಗಳನ್ನು ಎದುರಿಸಿ ಸಂಸ್ಥೆಯನ್ನು ಕಟ್ಟಲಾಗಿದೆ’ ಎಂದರು.
ಆಡಳಿತ ಮಂಡಳಿ ಸದಸ್ಯ ಎಸ್.ಪಿ. ಬಳಿಗಾರ ಮಾತನಾಡಿ ‘ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದೇ ನಮ್ಮ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ. ವಿಶಾಲವಾದ ಬಯಲಿನಲ್ಲಿ ಪ್ರೌಢಶಾಲೆ ತಲೆ ಎತ್ತಿ ನಿಂತಿದೆ. ನುರಿತ ಶಿಕ್ಷಕ ವರ್ಗ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ನಾಡೋಜ ಡಾ.ಮನು ಬಳಿಗಾರ, ಡಾ.ಶಂಭು ಬಳಿಗಾರ, ಪೊಲೀಸ್ ಅಧಿಕಾರಿ ಶಂಕರ ರಾಗಿ, ಡಾ.ನೀಲಗಿರಿ ತಳವಾರ ಸೇರಿದಂತೆ ಇನ್ನೂ ಉನ್ನತ ಸ್ಥಾನದಲ್ಲಿ ಇರುವ ನೂರಾರು ಮೇಧಾವಿಗಳು ಈ ಶಾಲೆಯ ಹಳೇ ವಿದ್ಯಾರ್ಥಿಗಳು ಎಂಬುದೇ ನಮಗೆಲ್ಲ ಹೆಮ್ಮೆ’ ಎಂದರು.
ಆಡಳಿತ ಮಂಡಳಿ ಅಧ್ಯಕ್ಷ ಎನ್.ಸಿ. ಹುನಗುಂದ, ಕಾರ್ಯದರ್ಶಿ ಸಿ.ಎಂ. ರಾಗಿ, ಎಸ್.ಜೆ. ಯಲಿಗಾರ, ವೀರಣ್ಣ ಪವಾಡದ, ಎಫ್.ಕೆ. ಕಾಳಪ್ಪನವರ, ಬಿ.ಎಫ್. ತೋಟದ, ಬಿ.ಎಂ. ಕಳಸದ, ಮುಖ್ಯ ಶಿಕ್ಷಕ ಸಿ.ಬಿ. ಮೊಗಲಿ, ಎಲ್.ಪಿ. ಲಮಾಣಿ, ವೈ.ಎಂ. ಬಸಾಪುರ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.