ಲಕ್ಷ್ಮೇಶ್ವರ: ಕಳೆದ ಸೋಮವಾರ ಸುರಿದ ಭಾರಿ ಮಳೆಗೆ ಗೊಜನೂರು–ಯಳವತ್ತಿ ರಸ್ತೆಯಲ್ಲಿನ ನೀರು ಸರಿಯಾಗಿ ಹರಿದುಹೋಗದೆ ರೈತರ ಹೊಲಕ್ಕೆ ನುಗ್ಗಿತ್ತು. ಇದರಿಂದಾಗಿ ಹತ್ತಾರು ಎಕರೆ ಜಮೀನಿನ ಮಣ್ಣು ಕೊಚ್ಚಿಕೊಂಡುಹೋಗಿ ರೈತರಿಗೆ ನಷ್ಟ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಶಾಸಕ ಡಾ.ಚಂದ್ರು ಲಮಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆ ನೀರು ಹೊಲಗಳಿಗೆ ನುಗ್ಗದಂತೆ ವ್ಯವಸ್ಥೆ ಮಾಡಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ರೈತರು ದಾರಿಯ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದ್ದರು.
ಗೊಜನೂರು–ಯಳವತ್ತಿ ರಸ್ತೆಯನ್ನು ಡಾಂಬರೀಕರಣ ಮಾಡುವ ಸಂದರ್ಭದಲ್ಲಿ ಕೆಲ ರೈತರು ತಕರಾರು ತೆಗೆದಿದ್ದರಿಂದ 200 ಮೀಟರ್ ರಸ್ತೆ ಹಾಗೆಯೇ ಉಳಿದುಕೊಂಡಿದೆ. ಈ ಮಣ್ಣು ರಸ್ತೆಯೇ ಈಗ ಸಮಸ್ಯೆಗೆ ಕಾರಣವಾಗಿದೆ. ಈ ಮೊದಲು ಹರಿಯುತ್ತಿದ್ದ ದಿಕ್ಕಿಗೆ ಮಳೆ ನೀರು ಹರಿಯದೆ ಬೇರೆ ದಿಕ್ಕಿಗೆ ಹರಿದ ಪರಿಣಾಮ ಹೊಲಗಳಿಗೆ ನೀರು ನುಗ್ಗಿತ್ತು.
ತಹಶೀಲ್ದಾರ ವಾಸುದೇವಸ್ವಾಮಿ, ಕಂದಾಯ ನಿರೀಕ್ಷಕ ಬಿ.ಎಂ. ಕಾತ್ರಾಳ ಮತ್ತು ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.