ನರೇಗಲ್: ಹೋಬಳಿಯಲ್ಲಿ ವಿಶೇಷವಾಗಿ ಆಚರಿಸುವ ರೈತರ ಮೊದಲ ಕೃಷಿ ಹಬ್ಬವೆಂದೇ ಖ್ಯಾತಿ ಪಡೆದಿರುವ ಮಣ್ಣೆತ್ತಿನ ಅಮಾವಾಸೆ ಶುಕ್ರವಾರವಿದ್ದು, ಮಣ್ಣಿನಿಂದ ಮಾಡಿದ ಎತ್ತುಗಳ ಜೋಡಿಗೆ ಪೂಜೆ ಮಾಡುವುದು ವಿಶೇಷವಾಗಿದೆ.
ಮಣ್ಣಿನ ಎತ್ತುಗಳ ಮಾರಾಟ ಪಟ್ಟಣದಲ್ಲಿ ಹಾಗೂ ಹೋಬಳಿಯ ವಿವಿಧ ಗ್ರಾಮದಲ್ಲಿ ಗುರುವಾರ ಜೋರಾಗಿತ್ತು.
ರೈತರು ತಮ್ಮ ಆಪ್ತಮಿತ್ರ ಎತ್ತಿನ ಜೋಡಿಗೆ ವಿಶೇಷ ಪೂಜೆ ಮಾಡುವುದರ ಮೂಲಕ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸುತ್ತಾರೆ. ತನ್ನದೆಯಾದ ವೈಶಿಷ್ಟ್ಯವನ್ನು ಹೊಂದಿರುವ ಮಣ್ಣಿನ ಮೂರ್ತಿಗಳನ್ನು ಪಟ್ಟಣದ ನಿವಾಸಿ ಸೋಮಣ್ಣ ಕುಂಬಾರ ಮೂರು ತೆಲೆ ಮಾರುಗಳಿಂದ ಮಣ್ಣಿನ ಮೂರ್ತಿಗಳನ್ನು ತಯಾರಿಸಿ ಅಲ್ಪ ಹಣಕ್ಕೆ ಮಾರುವ ಕಾಯಕವನ್ನು ಮಾಡಿಕೊಂಡು ಬಂದಿದ್ದಾರೆ.
‘ಈ ಬಾರಿ ಸಣ್ಣ ಬಸವಣ್ಣನಿಗೆ ₹50 ಹಾಗೂ ದೊಡ್ಡ ಬಸವಣ್ಣನಿಗೆ ₹100 ರಂತೆ ಮಾರಾಟ ಮಾಡುತ್ತಿದ್ದೇವೆ’ ಎಂದು ಹೇಳಿದರು.
ಹಬ್ಬದ ಮೊದಲು ಹಾಗೂ ನಂತರದ ಎರಡು ದಿನಗಳ ಕಾಲ ಬೆಳಿಗ್ಗೆಯಿಂದ ಸಂಜೆಯವರೆಗೆ ವ್ಯಾಪಾರ ನಡೆಯುತ್ತದೆ. ಕೆಲ ಮಣ್ಣಿನ ಬಸವಣ್ಣನಿಗೆ ಬಣ್ಣಹಚ್ಚಿ ಅಲಂಕಾರವೂ ಮಾಡಲಾಗಿರುತ್ತದೆ ಎಂದರು.
‘ಮಣ್ಣಿನಿಂದ ತಯಾರಿಸಲ್ಪಟ್ಟ ಚಿಕ್ಕ ಮೂರ್ತಿಗಳನ್ನು ಮಾರುಕಟ್ಟೆಯಿಂದ ಖರೀದಿಸಿ ಪದ್ಧತಿಯಂತೆ ಮನೆಯಲ್ಲಿ ಪೂಜೆ ಮಾಡುತ್ತಾರೆ. ಆನಂತರ ಅದಕ್ಕೆ ಮಳೆ, ಬೆಳೆ, ಆಯಸ್ಸು, ಸಂಪತ್ತು, ಸುಖ-ಸಂತೋಷಕ್ಕಾಗಿ ವಿಶೇಷವಾಗಿ ಪ್ರಾರ್ಥಿಸುತ್ತೇವೆ’ ಎಂದು ರೈತರಾದ ಶರಣಪ್ಪ ಧರ್ಮಾಯತ, ಆನಂದ ಕೊಟಗಿ, ಚಂದ್ರು ಹೊನವಾಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.