ಗಜೇಂದ್ರಗಡ: ಪಟ್ಟಣದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ₹1.32 ಲಕ್ಷ ನಗದು ಹಾಗೂ 2 ಕೆ.ಜಿ ಬೆಳ್ಳಿ ವಸ್ತುಗಳನ್ನು ಮಂಗಳವಾರ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಟಾಟಾ ಏಸ್ ವಾಹನದಲ್ಲಿ ಮಹಮದ್ಸಲಿಂ ಮಹಮ್ಮದಗೌಸ್ ಚುಜ್ಜು, ಚಬ್ಬೀರಅಹಮದ್ ಅಬ್ದುಲಸತಾರಿ ಆದೋನಿ ಎಂಬುವವರು ಹುಬ್ಬಳ್ಳಿಯಿಂದ ಪಟ್ಟಣಕ್ಕೆ ಬಂದು ಅಲ್ಮಾರ್ಗಳನ್ನು ಮಾರಾಟ ಮಾಡಿ ಮರಳಿ ಹುಬ್ಬಳ್ಳಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಸೂಕ್ತ ದಾಖಲೆಗಳಿಲ್ಲದ ₹1.32 ಲಕ್ಷ ನಗದನ್ನು ಪಟ್ಟಣದ ಹೊರ ವಲಯದ ಚಿಲಝರಿ ಕ್ರಾಸ್ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದೇ ಸಂದರ್ಭದಲ್ಲಿ ಗದಗದಿಂದ ಗಜೇಂದ್ರಗಡಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ ಚಿನ್ನಾಭರಣ ತಯಾರಿಸುವ ವ್ಯಾಪಾರಿ ಗುರುನಂದನ ದಿಗಂಬರ ಪವಸ್ಕರ ಸೂಕ್ತ ದಾಖಲೆಗಳಿಲ್ಲದೆ ಬ್ಯಾಗ್ನಲ್ಲಿ ಸಾಗಿಸುತ್ತಿದ್ದ ಸುಮಾರು 2 ಕೆ.ಜಿ ತೂಕದ ವಿವಿಧ ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆದು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ, ಪ್ಲೈಯಿಂಗ್ ಸ್ವಾಡ್ನ ಮುಖ್ಯಸ್ಥ ಮಹೇಶ ರಾಠೋಡ, ಪಿಎಸ್ಐ ಸೋಮನಗೌಡ ಗೌಡ್ರ ಭೇಟಿ ನೀಡಿ ಪರಿಶೀಲಿಸಿದರು. ವಶಕ್ಕೆ ಪಡೆದು ಜಿಲ್ಲಾ ಸ್ಕ್ರೀನಿಂಗ್ ಕಮಿಟಿ ಪರಿಶೀಲನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.