ಹಾಸನ: ಕಪ್ಪು ಬಣ್ಣ ಅಶುಭ ಎಂಬುದು ಹಲವರ ಭಾವನೆ. ಕಪ್ಪು ಬಣ್ಣವನ್ನು ಯಾವುದೇ ಶುಭ ಸಮಾರಂಭಗಳಲ್ಲಿ ಬಳಸುವುದಿಲ್ಲ. ಆದರೆ ಶಾಲೆಯ ತರಗತಿಯಲ್ಲಿರುವ ಕಪ್ಪು ಹಲಗೆ ಮಕ್ಕಳ ಭವಿಷ್ಯವನ್ನೇ ರೂಪಿಸುತ್ತದೆ ಎಂದು ಅರಸೀಕೆರೆಯ ಅನಂತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್. ಅನಂತ್ಕುಮಾರ್ ಹೇಳಿದರು.
ನಗರದ ರಾಜೀವ್ ಆಯುರ್ವೇದ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ 5ನೇ ಬ್ಯಾಚ್ನ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಹಾಗೂ 15 ದಿನಗಳ ಒರಿಯಂಟೇಶನ್ ಕಾರ್ಯಕ್ರಮ ಅಭಿನವ- 2023 ಉದ್ಘಾಟಿಸಿ ಅವರು ಮಾತನಾಡಿದರು.
‘ವೈದ್ಯನಾದವನು ನಾರಾಯಣನಿಗೆ ಸಮಾನ. ನೀವು ಆಯ್ಕೆ ಮಾಡಿದ ಆಯುರ್ವೇದ ವೈದ್ಯಕೀಯ ಕೋರ್ಸ್ ಹೆಚ್ಚಿನ ಗೌರವ ಹೊಂದಿದೆ. ಸಮಾಜಕ್ಕೆ ಮಾದರಿಯಾಗಿ ಸೇವೆಯನ್ನು ಮಾಡಿ ಜನರ ಆರೋಗ್ಯವನ್ನು ಕಾಪಾಡಿ’ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಹೆಚ್ಚಿನ ಪಾಶ್ಚಿಮಾತ್ಯರು ಆಯುರ್ವೇದ ಚಿಕಿತ್ಸಾ ಪದ್ಧತಿ ಅನುಸರಿಸಿ, ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಭಾರತೀಯರು ಇತ್ತೀಚಿನ ದಿನಗಳಲ್ಲಿ ಆಯುರ್ವೇದದತ್ತ ಒಲವು ತೋರಿಸುತ್ತಿದ್ದು, ದುಷ್ಪರಿಣಾಮ ರಹಿತ ಔಷಧೀಯ ಪದ್ಧತಿ ಎಂದು ಹೆಸರುವಾಸಿಯಾಗುತ್ತಿದೆ ಎಂದರು.
ಹಾಸನಾಂಬ ಆಸ್ಪತ್ರೆಯ ನಿರ್ದೇಶಕ ಡಾ. ಜಿ.ಎನ್. ಬಸವರಾಜ್ ಮಾತನಾಡಿ, ನಾವು ಯಾವುದೇ ಕೋರ್ಸ್ ಆಯ್ಕೆ ಮಾಡಿದರೂ, ಅದರಲ್ಲಿ ಶ್ರದ್ಧೆ, ಭಕ್ತಿ ಹಾಗೂ ಇಷ್ಟಪಟ್ಟು ಅಭ್ಯಾಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಕಷ್ಟಪಡದೇ ಸುಖ ಅನುಭವಿಸಲು ಸಾಧ್ಯವಿಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಾಜೀವ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಎನ್. ರತ್ನಾ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಗಳು ಸುಸಜ್ಜಿತ, ಸುವ್ಯವಸ್ಥೆಯ ಕಟ್ಟಡಗಳನ್ನು ಹೊಂದಿದ್ದು, ಉನ್ನತ ಗುಣಮಟ್ಟದ ಶಿಕ್ಷಕರು ವಿದ್ಯಾರ್ಥಿಗಳಿಗೆ ಯಾವುದೇ ಕುಂದುಕೊರತೆ ಇಲ್ಲದೇ ಜ್ಞಾನಾರ್ಜನೆ ಮಾಡುತ್ತಿದ್ದಾರೆ. ರಾಜೀವ್ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ ಎಂದು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎ. ನಿತಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ವಿದ್ಯಾಥಿಗಳಾದ ಕಿರಣ್ ಎ.ಪಿ., ಸತ್ಯಶ್ರೀ, ಸುಭಾಷಿಣಿ ಮತ್ತು ಐಶ್ವರ್ಯ ಅನುಭವ ಹಂಚಿಕೊಂಡರು. ಪಾಂಡುರಂಗ ಸ್ವಾಗತಿಸಿದರು. ಡಾ. ಶ್ಯಾಮಿಲಿ ವಂದಿಸಿದರು. ಸ್ಪಂದನಾ ಹಾಗೂ ರಚನಾ ಜಗದೀಶ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.