ADVERTISEMENT

ಮುಖ್ಯಮಂತ್ರಿಯಾಗುವುದಾಗಿ ಕುಮಾರಸ್ವಾಮಿ ಹಗಲು ಕನಸು: ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 14:24 IST
Last Updated 11 ಜುಲೈ 2024, 14:24 IST
ಚಲುವರಾಯಸ್ವಾಮಿ
ಚಲುವರಾಯಸ್ವಾಮಿ   

ಪ್ರಜಾವಾಣಿ ವಾರ್ತೆ

ಹಾಸನ: ‘ಇನ್ನೂ ನಾಲ್ಕು ವರ್ಷ ನಮ್ಮದೇ ಸರ್ಕಾರ ಅಧಿಕಾರದಲ್ಲಿರಲಿದೆ. ಆದರೆ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವ ಹಗಲು ಕನಸು ಕಾಣುತ್ತಿದ್ದಾರೆ’ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡುವುದರ ಹಿಂದೆ ಸರ್ಕಾರಕ್ಕೆ ಹಲವು ಉದ್ದೇಶಗಳಿವೆ. ಆದರೆ, ತಾವು ಮುಖ್ಯಮಂತ್ರಿಯಾದರೆ ಮತ್ತೆ ರಾಮನಗರ ಹೆಸರನ್ನೇ ಇಡುವುದಾಗಿ ಹೇಳಿ ಹಗಲು ಕನಸು ಕಾಣುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಅವರು, ಆರ್‌.ಅಶೋಕ್, ಎನ್‌.ಅಶ್ವತ್ಥನಾರಾಯಣ್, ಬಿ.ವೈ.ವಿಜಯೇಂದ್ರ ಅವರಿಗೆ ಯಾವ ಅಧಿಕಾರ ನೀಡಲಿದ್ದಾರೆ? ಕೇವಲ ಎರಡು ಸೀಟು ಪಡೆದು, ಹಲವು ವರ್ಷಗಳ ಕಾಲ ಪಕ್ಷಕ್ಕೆ ನಿಷ್ಠೆಯಿಂದ ದುಡಿದ ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ ಶೆಟ್ಟರ್ ಅವರನ್ನು ಬದಿಗೆ ಸರಿಸಿ ಕೇಂದ್ರ ಸಚಿವರಾಗಿದ್ದಾರೆ’ ಎಂದರು.

‘ಕೇಂದ್ರ ಸಚಿವರಾಗಿ ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಅವರು ಸಭೆ ಮಾಡುವುದೇ ಆದರೆ, ದಿಶಾ ಸಭೆ ಮಾಡಲಿ. ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಲಿ. ನಮ್ಮ ಅಭ್ಯಂತರವಿಲ್ಲ’ ಎಂದರು.

ಡ್ರೋನ್‌ ಮೂಲಕ ಬಿತ್ತನೆ: ‘ಕೇರಳದಲ್ಲಿ ಡ್ರೋನ್‌ ಮೂಲಕ ಔಷಧಿ ಸಿಂಪಡಣೆ ಹಾಗೂ ಬಿತ್ತನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಔಷಧಿ ಸಿಂಪಡಣೆಗೆ ಡ್ರೋನ್‌ ಬಳಸಲಾಗುತ್ತಿದ್ದು, ಬಿತ್ತನೆ ಕಾರ್ಯಕ್ಕೂ ಬಳಸುವ ಸಂಬಂಧ ಕೃಷಿ ವಿಶ್ವವಿದ್ಯಾಲಯದಿಂದ ಮಾಹಿತಿ ಪಡೆಯಲಾಗುವುದು’ ಎಂದರು.

‘ರಾಜ್ಯದಲ್ಲಿ ಕಳಪೆ ಔಷಧಿ ವಿತರಣೆಯ 5,256 ಪ್ರಕರಣ ದಾಖಲಾಗಿದ್ದು, 74ರಲ್ಲಿ ದೃಢಪಟ್ಟಿದೆ. ಅಂತಹ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.