ಹಿರೀಸಾವೆ: ಬೆರಳು ರೇಖೆಗಳು ಸವೆದ ರೈತರ ಬೆರಳಚ್ಚು ಬಾರದೆ ಮಂಗಳವಾರ ನಾಫೆಡ್ಗೆ ಕೊಬ್ಬರಿ ಮಾರಾಟಕ್ಕೆ ಹೆಸರು ನೋಂದಣಿ ಮಾಡಿಸಲಾಗದೆ ಕೆಲವರು ಬೇಸರದಿಂದ ಹಿಂದಿರುಗಿದರು.
ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಸರತಿ ಸಾಲಿನಲ್ಲಿ ನಿಂತು ಹೆಸರು ನೋಂದಣಿ ಮಾಡಿಸಿದರು.
ಸೋಮವಾರ ನೂರಾರು ರೈತರು ಒಂದೇ ಸಲ ಗುಂಪಾಗಿ ನುಗ್ಗಿದ್ದರಿಂದ ನೋಂದಣಿಯನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದರು. ಸಂಜೆ ಡಿವೈಎಸ್ಪಿ ರವಿಪ್ರಸಾದ್ ಮತ್ತು ರೈತ ಸಂಘದ ಮಂಜೇಗೌಡ ಅವರ ನೇತೃತ್ವದಲ್ಲಿ ದಿನಕ್ಕೆ 300 ರೈತರಿಗೆ ಟೋಕನ್ ನೀಡಲಾಗಿತ್ತು. ಅದರಂತೆ ಇಂದು ರೈತರು ನೋಂದಣಿ ಮಾಡಿಸಿದರು.
ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಿಕೊಂಡು, ಯಾವುದೇ ಗೊಂದಲ ಆಗದಂತೆ ನೋಂದಣಿ ಪ್ರಕ್ರಿಯೆ ನಡೆಯಿತು. ಅಂಗವಿಕಲರಿಗೆ ನೇರವಾಗಿ ಕೌಂಟರ್ಗೆ ಬರಲು ಅವಕಾಶ ಮಾಡಿರುವುದಾಗಿ ಎಸ್ಐ ಸುಪ್ರಿತ್ ‘ಪ್ರಜಾವಾಣಿ’ಗೆ ತಿಳಿಸಿದರು.
ಬೆರಳಚ್ಚು ಬಾರದೆ ಇರುವ ರೈತರಿಗೆ ಐ ಸ್ಕ್ಯಾನ್ ಅಥವಾ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು ಎಂದು ರೈತ ಅಂತನಹಳ್ಳಿ ಅಣ್ಣಪ್ಪಸ್ವಾಮಿ ಆಗ್ರಹಿಸಿದರು.
ನೋಂದಣಿ ಮಾಡಿಸಲು ಬಂದಿದ್ದ ರೈತರಿಗೆ ಶಾಸಕ ಬಾಲಕೃಷ್ಣ ಅವರು ಉಪಾಹಾರದ ವ್ಯವಸ್ಥೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.