ADVERTISEMENT

ಹಾಸನ | ಅಜ್ಜನಿಗೆ ಮೆಹಂದಿ ಕೋನ್‌ ತನ್ನಿ ಎಂದ ದಾದಿ

ಉಬ್ಬಿದ ರಕ್ತನಾಳ ಶಸ್ತ್ರಚಿಕಿತ್ಸಗೆ ಗುರುತು ಹಾಕಲು ಕೋನ್‌ ಅಗತ್ಯ: ವೈದ್ಯರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 15:28 IST
Last Updated 25 ಜೂನ್ 2024, 15:28 IST
ಅಜ್ಜನಿಗೆ ಬರೆದುಕೊಟ್ಟಿದ್ದ ಔಷಧಿ ಚೀಟಿ.
ಅಜ್ಜನಿಗೆ ಬರೆದುಕೊಟ್ಟಿದ್ದ ಔಷಧಿ ಚೀಟಿ.   

ಹಾಸನ: ಕಾಲು ನೋವಿನ ‌ಸಮಸ್ಯೆಯಿಂದ ಇಲ್ಲಿನ ಜಯಚಾಮರಾಜೇಂದ್ರ ಜಿಲ್ಲಾ ಆಸ್ಪತ್ರೆಗೆ ಮಂಗಳವಾರ ಬಂದಿದ್ದ ವೃದ್ಧ ಈರಯ್ಯ ಅವರಿಗೆ, ಬ್ಯಾಂಡೇಜ್‌ ಜೊತೆಗೆ ಮೆಹಂದಿ ಕೋನ್‌ ತರಲು ಸೂಚಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಆದರೆ, ‌ಕಾಲಿನ ಉಬ್ಬಿದ ರಕ್ತನಾಳ ಶಸ್ತ್ರಚಿಕಿತ್ಸೆ ನಡೆಸಬೇಕಿದ್ದು, ಬಾಧಿತ ಭಾಗವನ್ನು ಗುರುತು ಮಾಡಲು ಮೆಹಂದಿ ಕೋನ್‌ ತರಿಸಿದ್ದಾಗಿ ವೈದ್ಯರು ಸ್ಪಷ್ಟಪಡಿಸಿದ ಬಳಿಕ ಕುತೂಹಲಕ್ಕೆ ತೆರೆ ಬಿತ್ತು.

‌ಈರಯ್ಯ ಅವರಿಗೆ ಔಷಧಿ ಚೀಟಿ ನೀಡಿದ್ದ ದಾದಿಯೊಬ್ಬರು, ಎರಡು ಕ್ರೇಪ್‌ ಬ್ಯಾಂಡೇಜ್‌ ಹಾಗೂ ಒಂದು ಮೆಹಂದಿ ಕೋನ್‌ ತರಬೇಕೆಂದು ಬರೆದಿದ್ದರು. ಔಷಧಿ ಅಂಗಡಿಯಲ್ಲಿ ಚೀಟಿಯನ್ನು ತೋರಿಸಿದಾಗ, ‘ಮೊದಲನೆಯದ್ದು ಮೆಹಂದಿ ಕೋನ್‌. ಔಷಧಿಯಲ್ಲ. ಏಕೆ ಬರೆದುಕೊಟ್ಟಿದ್ದಾರೆ’ ಎಂದು ಅಂಗಡಿಯವರು ಪ್ರಶ್ನಿಸಿದ್ದರು. ಈರಯ್ಯ ಭೇಟಿ ನೀಡಿದ ಎಲ್ಲ ಔಷಧ ಅಂಗಡಿಗಳಲ್ಲೂ ಇದೇ ಪ್ರಶ್ನೆ ಎದುರಾಗಿತ್ತು.

ADVERTISEMENT

ಕೊನೆಗೆ ದಾರಿಯಲ್ಲಿ ಸಿಕ್ಕ ಸಾಮಾಜಿಕ ಹೋರಾಟಗಾರ್ತಿ ಸುನೀತಾ ಹೆಬ್ಬಾರ್‌ ಅವರು, ‘ಈ ಬಗ್ಗೆ ದಾದಿಯನ್ನೇ ಕೇಳಿ’ ಎಂದು ಸಲಹೆ ನೀಡಿದ್ದರು. ನಂತರ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪಿಸಿದ್ದರಿಂದ, ಚರ್ಚೆ ನಡೆದಿತ್ತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ‌‌ಹಿಮ್ಸ್‌ ನಿರ್ದೇಶಕ ಡಾ.ಎಸ್.ವಿ. ಸಂತೋಷ್‌, ‘ಈರಯ್ಯ ಉಬ್ಬಿದ ರಕ್ತನಾಳ ಸಮಸ್ಯೆಯಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾಧಿತ ಭಾಗಕ್ಕೆ ಪೆನ್‌ನಿಂದ ಗುರುತು ಹಾಕಿದರೆ, ಎರಡು ದಿನಗಳಲ್ಲಿ ಅಳಿಸಿ ಹೋಗುತ್ತದೆ. ಹೀಗಾಗಿ ಮೆಹಂದಿ ಕೋನ್‌ನಿಂದ ಗುರುತು ಹಾಕಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.