ADVERTISEMENT

ಕನ್ನಡ ಚಿತ್ರರಂಗದಿಂದ ದರ್ಶನ್ ಬಹಿಷ್ಕರಿಸಲು ಆಗ್ರಹ

ಸಿನಿಮಾ ಪ್ರದರ್ಶನ ಬೇಡ: ಮೈಸೂರು ಭಾಗದಲ್ಲಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 14:35 IST
Last Updated 13 ಜೂನ್ 2024, 14:35 IST
ಕನ್ನಡ ಚಿತ್ರರಂಗದಿಂದ ನಟ ದರ್ಶನ್‌ ಅವರನ್ನು ಬಹಿಷ್ಕರಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಮಂಡ್ಯದಲ್ಲಿ ಗುರುವಾರ ಪ್ರತಿಭಟಿಸಿದರು.
ಕನ್ನಡ ಚಿತ್ರರಂಗದಿಂದ ನಟ ದರ್ಶನ್‌ ಅವರನ್ನು ಬಹಿಷ್ಕರಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಮಂಡ್ಯದಲ್ಲಿ ಗುರುವಾರ ಪ್ರತಿಭಟಿಸಿದರು.   

ಮೈಸೂರು: ‘ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಸಿನಿಮಾಗಳನ್ನು ನಿಷೇಧಿಸಬೇಕು, ಕನ್ನಡ ಚಿತ್ರರಂಗದಿಂದಲೇ ದರ್ಶನ್‌ ಅವರನ್ನು ಬಹಿಷ್ಕರಿಸಬೇಕು’ ಎಂಬ ಆಗ್ರಹ ಮೈಸೂರು ಭಾಗದಲ್ಲಿ ಎದ್ದಿದೆ.

ಹಾಸನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಮುಖಂಡ ಎ.ಟಿ. ರಾಮಸ್ವಾಮಿ, ‘ಉರಿದವರು ಬೂದಿಯಾಗಲೇಬೇಕು ಎನ್ನುವುದಕ್ಕೆ ನಟ ದರ್ಶನ್ ಸ್ಪಷ್ಟ ಉದಾಹರಣೆ. ಅವರನ್ನು ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಹೊರದಬ್ಬಬೇಕು’ ಎಂದು ಒತ್ತಾಯಿಸಿದರು.

‘ನಟ ದರ್ಶನ್ ಮಾಡಿರುವ ಘನ ಘೋರ ಅಪರಾಧಗಳನ್ನು ಎಲ್ಲರೂ ಖಂಡಿಸಲೇಬೇಕು. ರೇಣುಕಸ್ವಾಮಿಯನ್ನು ಸಿನಿಮಾ ಶೈಲಿಯಲ್ಲಿ ಅಪಹರಣ ಮಾಡಿ, ಬೆಂಗಳೂರಿಗೆ ಕರೆತಂದು ಕೊಲೆ ಮಾಡಿದ್ದಾರೆ. ನಟನಾದವನು ನಾಡಿನ ಕಲೆ, ಸಂಸ್ಕೃತಿ, ಸಂಪ್ರದಾಯ ಎತ್ತಿ ಹಿಡಿಯಬೇಕಿತ್ತು’ ಎಂದು ಪ್ರತಿಪಾದಿಸಿದರು.

ADVERTISEMENT

‘ಈ ಹಿಂದೆ ಕೆಲವು ಪ್ರಕರಣಗಳಲ್ಲಿ ಆರೋಪಿಗಳು ಹಣದಿಂದ ಖುಲಾಸೆಯಾಗಿದ್ದಾರೆ. ಇದು ಕಾನೂನಿನ ದೌರ್ಬಲ್ಯವೋ ಎನ್ನುವುದು ತಿಳಿಯುತ್ತಿಲ್ಲ’ ಎಂದರು.

ಪ್ರತಿಭಟನೆ (ಮಂಡ್ಯ ವರದಿ):

‘ಚಿತ್ರರಂಗದಿಂದ ದರ್ಶನ್‌ ಅವರನ್ನು ಬಹಿಷ್ಕರಿಸಬೇಕು. ಅವರ ಎಲ್ಲ ಸಿನಿಮಾಗಳನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ (ರೈತ ಬಣ)ದ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಮಾತನಾಡಿ, ‘ದರ್ಶನ್ ಪ್ರಭಾವಿ ನಟ. ಹತ್ಯೆ ಪ್ರಕರಣದಲ್ಲಿ  ಭಾಗಿಯಾಗಿರುವುದರಿಂದ ಪ್ರಕರಣವನ್ನು ಮುಚ್ಚಿಹಾಕುವ ಸಾಧ್ಯತೆ ಇದೆ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಕಾನೂನು ಕೈಗೆತ್ತಿಕೊಂಡಿರುವ ದರ್ಶನ್ ಮತ್ತು ಇತರೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.

ಎ.ಟಿ.ರಾಮಸ್ವಾಮಿ
ನಟ ದರ್ಶನ್‌ ಅಂಥವರಿಂದಲೇ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಹಣ ಹೆಸರು ಗಳಿಸಿ ಹೇಯ ಕೃತ್ಯ ಎಸಗಿರುವುದು ನಾಡಿಗೆ ಅಗೌರವ ತಂದಂತಾಗಿದೆ. ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು Quote - ನಟ ದರ್ಶನ್‌ ಅಂಥವರಿಂದಲೇ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಹಣ ಹೆಸರು ಗಳಿಸಿ ಹೇಯ ಕೃತ್ಯ ಎಸಗಿರುವುದು ನಾಡಿಗೆ ಅಗೌರವ ತಂದಂತಾಗಿದೆ. ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು
ಎ.ಟಿ. ರಾಮಸ್ವಾಮಿ ಬಿಜೆಪಿ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.