ಹೊಳೆನರಸೀಪುರ: ‘ಪ್ರಜ್ವಲ್ ಪೆನ್ಡ್ರೈವ್ ಪ್ರಕರಣದಲ್ಲಿ ಬಿಜೆಪಿ ಮುಖಂಡ ಹಾಗೂ ವಕೀಲ ಜಿ.ದೇವರಾಜೇಗೌಡರನ್ನು ಕಾಣದ ಕೆಲವು ಕೈಗಳು ಬಲಿಪಶು ಮಾಡಲು ಹೊರಟಿವೆ. ಯಾವುದೇ ತಪ್ಪು ಮಾಡಿರದಿದ್ದರೆ ಖಂಡಿತ ಬೇಗ ಹೊರಬರುತ್ತಾರೆ’ ಎಂದು ಅವರ ಪರ ವಕೀಲ ಸುನೀಲ್ ಅಭಿಪ್ರಾಯಪಟ್ಟರು.
ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಪೆನ್ಡ್ರೈವ್ ಬಗ್ಗೆ ಕೆಲವು ಕಾಂಗ್ರೆಸ್ ನಾಯಕರಿಗೆ ಅವರು ಮಾಹಿತಿ ನೀಡಿದ್ದರ ಬಗ್ಗೆ ಮಾಧ್ಯಮಗಳ ಮೂಲಕ ವಿವರಿಸಿದ ನಂತರ, ಮುಜುಗರಕ್ಕೆ ಒಳಗಾದ ಕಾಣದ ಕೈಗಳು ಸಂಚು ರೂಪಿಸಿವೆ’ ಎಂದರು.
‘ಲೈಂಗಿಕ ದೌಜನ್ಯ ನಡೆಸಿದ್ದಾರೆಂದು ಏಪ್ರಿಲ್ 1 ರಂದು ದೂರು ನೀಡಿರುವ ಮಹಿಳೆಯ ವಿರುದ್ದ, ಹನಿಟ್ರ್ಯಾಪ್ ಆರೋಪ ಹೊರಿಸಿ ದೇವರಾಜೇಗೌಡರು ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ’ ಎಂದು ಇನ್ನೊಬ್ಬ ವಕೀಲ ಚಂದ್ರಶೇಖರ್ ಹೇಳಿದರು.
‘ದೂರು ದಾಖಲಿಸಿಕೊಂಡು, ಇದುವರೆಗೂ ಸುಮ್ಮನಿದ್ದ ಪೊಲೀಸರು, ಪೆನ್ಡ್ರೈವ್ ಸಂಬಂಧ ಹೇಳಿಕೆ ನೀಡುತ್ತಿದ್ದಂತೆಯೇ ಬಂಧಿಸಿದ್ದಾರೆ. ಅದರ ಹಿಂದೆ ಏನೋ ಉದ್ದೇಶವಿದೆ ಎಂಬುದನ್ನು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಡಲಾಗಿದೆ. ಹೀಗಾಗಿ ದೇವರಾಜೇಗೌಡರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ’ ಎಂದು ಮತ್ತೊಬ್ಬ ವಕೀಲ ಚಂದ್ರಶೇಖರ್ ಪ್ರತಿಪಾದಿಸಿದರು.
‘ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾರು ಏನೇ ಆರೋಪ ಮಾಡಿದರೂ, ಸಾಕ್ಷಿ ಸಮೇತ ಸಾಬೀತಾದರೆ ಮಾತ್ರ ಅಪರಾಧಿ. ಅಲ್ಲಿಯವರೆಗೂ ದೇವರಾಜೇಗೌಡ ಆರೋಪಿ ಮಾತ್ರ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.