ಹಾಸನ: ವಿಜಯ ಶಾಲೆಯಲ್ಲಿ ಭಾನುವಾರ ಎಜುಟೈನ್ಮೆಂಟ್ ಕಾರ್ಯಕ್ರಮವನ್ನು ಆಯೋಜಿಸಿದ್ದು, ನಗರದ ಮಕ್ಕಳಿಗೆ ವಿಶಿಷ್ಟ ಕಲಿಕಾ ಅನುಭವ ಒದಗಿಸಿತು.
ಪಾಲಕರು ಸೇರಿದಂತೆ ನಗರದ ವಿವಿಧೆಡೆಯಿಂದ ಮಕ್ಕಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳ ನೇತೃತ್ವದ ಸಮ್ಮೇಳನಗಳ ಪರಿಕಲ್ಪನೆಯಿಂದ ಪ್ರೇರಿತರಾದ ವಿಜಯ ಪ್ರಿಸ್ಕೂಲ್ ವಿದ್ಯಾರ್ಥಿಗಳು, ವಿಜಯ ಆರಂಭಿಕ ವರ್ಷದ ಪಠ್ಯಕ್ರಮದ 10 ಪ್ರಮುಖ ವಿಷಯಗಳಲ್ಲಿನ ತಮ್ಮ ಕಲಿಕೆಯನ್ನು ಆತ್ಮವಿಶ್ವಾಸದಿಂದ ಪ್ರದರ್ಶಿಸಿದರು.
ಪ್ರೌಢಶಾಲಾ ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಿದ್ದರು. ಈ ಮೇಳವು ಸಾಂಪ್ರದಾಯಿಕ ಪ್ರದರ್ಶನಕ್ಕಿಂತ ಹೆಚ್ಚಾಗಿ, ಮಕ್ಕಳಲ್ಲಿ ತಲ್ಲೀನತೆ ಮತ್ತು ಸಂವಾದಾತ್ಮಕ ಅನುಭವದ ಮೂಲಕ ತಮ್ಮ ಸಾಮಾಜಿಕ ಕೌಶಲ ಹೆಚ್ಚಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು.
ಅಧ್ಯಕ್ಷ ವೈ.ಎನ್.ಸುಬ್ಬಸ್ವಾಮಿ ಮತ್ತು ಸಂಸ್ಥಾಪಕ ನಿರ್ದೇಶಕಿ ತಾರಾ ಎಸ್. ಸ್ವಾಮಿ, ಶಿಕ್ಷಕರು, 21ನೇ ಶತಮಾನದ ಕೌಶಲಗಳನ್ನು ಬಾಲ್ಯದಿಂದಲೇ ಉತ್ತೇಜಿಸಲು ಇಂತಹ ಹೆಚ್ಚಿನ ಚಟುವಟಿಕೆಗಳನ್ನು ಆಯೋಜಿಸುವಂತೆ ಪ್ರೋತ್ಸಾಹಿಸಿದರು. ಮುಖ್ಯ ಅತಿಥಿಗಳಾಗಿದ್ದ ಡಾ.ಸೌಮ್ಯಾಮಣಿ ಮಾತನಾಡಿ, ಮಗುವಿನ ಪೋಷಣೆಯಲ್ಲಿ ತಾಯಿ ಮತ್ತು ಕುಟುಂಬದ ಯೋಗಕ್ಷೇಮದ ಮಹತ್ವವನ್ನು ಹೇಳಿದರು. ಪ್ರಸವಪೂರ್ವ ಹಾಗೂ ಆರಂಭಿಕ ಕಲಿಕೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಮೇಳದ ಮೇಲ್ವಿಚಾರಕಿ ಡಾ.ಶ್ರೀಲಕ್ಷ್ಮಿ, ವಿಜಯ ಕಲಿಕಾ ಅನುಭವ ಕಾರ್ಯಕ್ರಮವು ನಮಗೆ ಒಂದು ಪ್ರದರ್ಶನಕ್ಕಿಂತ ಹೆಚ್ಚಾಗಿ ಯುವ ಮನಸ್ಸುಗಳನ್ನು ಲೈಫ್ ಲಾಂಗ್ ಲರ್ನರ್ಗಳನ್ನಾಗಿ ಮಾಡಲು ಪೋಷಕರು ಮತ್ತು ಸಮುದಾಯದೊಂದಿಗೆ ಪಾಲುದಾರಿಕೆಯನ್ನು ಬಲಪಡಿಸುವ ಅವಕಾಶವಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.