ADVERTISEMENT

ಹಾಸನ | ಪುರಸಭೆ ಸದಸ್ಯೆಯಿಂದ ಕಿರುಕುಳ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 14:13 IST
Last Updated 12 ಜನವರಿ 2024, 14:13 IST
ಆರ್‌ಪಿಐ ಪಕ್ಷದ ಕಾರ್ಯಕರ್ತರು ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಆರ್‌ಪಿಐ ಪಕ್ಷದ ಕಾರ್ಯಕರ್ತರು ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹಾಸನ: ಸಕಲೇಶಪುರ ಪಟ್ಟಣದಲ್ಲಿ ಕಟ್ಟಡ ನಿರ್ಮಾಣ ಸಂಬಂಧ ದಲಿತ ಕುಟುಂಬಕ್ಕೆ ಕಿರುಕುಳ ನೀಡುತ್ತಿರುವ ಪುರಸಭಾ ಸದಸ್ಯೆ ವಿರುದ್ಧ ಕಮ ಕೈಗೊಳ್ಳುವಂತೆ ಒತ್ತಾಯಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸತೀಶ್ ಮಾತನಾಡಿ, ಸಕಲೇಶಪುರ ಪುರಸಭಾ ವ್ಯಾಪ್ತಿಯ ವಾರ್ಡ್ ನಂಬರ್ 13 ರ ಚಂಪಕನಗರದಲ್ಲಿ ದಲಿತ ಕುಟುಂಬದ ಹೇಮಾವತಿ ಅವರಿಗೆ ಸೇರಿದ ಪುರಸಭೆ ಖಾತೆ ಹೊಂದಿರುವ 70X30 ಅಳತೆಯ ನಿವೇಶನದಲ್ಲಿ ಪರವಾನಗಿ ಪಡೆದು ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ನೆರೆಯವರಾದ 13ನೇ ವಾರ್ಡ್ ನ ಪುರಸಭಾ ಸದಸ್ಯೆ, ಹೇಮಾವತಿ ಅವರಿಗೆ ತೊಂದರೆ ನೀಡುತ್ತಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪುರಸಭೆ ಸದಸ್ಯೆ ಕಾನೂನುಬಾಹಿರವಾಗಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಈ ನಡುವೆ ಕಾನೂನು ಬದ್ಧವಾಗಿ ಕಟ್ಟಡ ಕಟ್ಟುತ್ತಿರುವ ಹೇಮಾವತಿ ಅವರಿಗೆ ನಿತ್ಯ ಕಟ್ಟಡ ಕೆಲಸ ಮಾಡದಂತೆ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.

ADVERTISEMENT

ಹೇಮಾವತಿ ಅವರು ದಲಿತ ಕುಟುಂಬಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ರಮೇಶ್ ಕುಮಾರ್, ಎಂಜಿನಿಯರ್ ಕವಿತಾ, ಕಂದಾಯ ಅಧಿಕಾರಿ ಪ್ರಕಾಶ್ ಹಾಗೂ ಇತರರು ಸೆಪ್ಟೆಂಬರ್ 30ರಂದು ಹೇಮಾವತಿ ಅವರ ಕಟ್ಟಡ ಕಾಮಗಾರಿ ಸ್ಥಳಕ್ಕೆ ಬಂದು ಗಲಾಟೆ ಮಾಡಿದ್ದಾರೆ. ಈ ರೀತಿ ಪದೇ ಪದೇ ಹೇಮಾವತಿಯವರಿಗೆ ತೊಂದರೆಯಾಗುತ್ತಿದ್ದು, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೇಮಾವತಿ ಅವರ ಕಟ್ಟಡ ನಿರ್ಮಾಣಕ್ಕೆ ತೊಂದರೆ ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.

ಬೋದೇಶ್, ರಾಜೇಶ್, ರಂಜಿತ್ ಕುಮಾರ್, ವಿಜಯ್ ಕುಮಾರ್, ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.