ಹಾಸನ: ‘ಕಾರಿನಲ್ಲಿ ಇಬ್ಬರೇ ಬಂದಿದ್ದು, ಒಬ್ಬರು ಇನ್ನೊಬ್ಬರಿಗೆ ಗುಂಡು ಹಾರಿಸಿ ನಂತರ ತಾವೂ ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಹೇಳಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಧ್ಯಾಹ್ನದ ವೇಳೆಗೆ ಕಾರಿನಲ್ಲಿ ನಿವೇಶನ ನೋಡಲು ಇಬ್ಬರು ಬಂದಿದ್ದರು. ಇಬ್ಬರೂ ಮಾತನಾಡಿಕೊಂಡು ಕಾರಿನತ್ತ ಬಂದಿದ್ದಾರೆ. ನಂತರ ಗುಂಡಿನ ಶಬ್ದ ಕೇಳಿ ಬಂದಿದೆ. ಅಕ್ಕಪಕ್ಕದವರು ಹೊರಗೆ ಬಂದು ನೋಡಿದಾಗ, ಒಂದು ಶವ ಹೊರಗಡೆ ಬಿದ್ದಿತ್ತು. ಇನ್ನೊಂದು ಶವ ಕಾರಿನಲ್ಲಿತ್ತು’ ಎಂದು ವಿವರಿಸಿದರು.
‘ನಿವೇಶನ ವಿಚಾರದಲ್ಲಿ ಜಗಳ ಆಗಿರಬಹುದು. ಶರಾಫತ್ ಅಲಿಗೆ ಗುಂಡು ಹೊಡೆದು ಕೊಲೆ ಮಾಡಿದ ಆಸೀಫ್, ಕಾರಿನಲ್ಲಿ ಕುಳಿತು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು. ಆದರೆ, ಈ ಬಗ್ಗೆ ತನಿಖೆ ಮಾಡುತ್ತಿದ್ದು, ನಂತರವಷ್ಟೇ ಸ್ಪಷ್ಟ ಮಾಹಿತಿ ದೊರೆಯಲಿದೆ’ ಎಂದು ಪೊಲೀಸರು ಹೇಳಿದರು.
‘ಕಾರಿನಲ್ಲಿ ಪಿಸ್ತೂಲ್ ಸಿಕ್ಕಿದೆ. ಕಾರು ಮೈಸೂರು ನೋಂದಣಿ ಹೊಂದಿದ್ದು, ಅದನ್ನು ಮಾರಾಟ ಮಾಡಲಾಗಿದೆಯೇ? ಇಬ್ಬರೂ ಎಲ್ಲಿಯವರು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಬೆರಳಚ್ಚು ತಜ್ಞರು, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಬಂದಿದ್ದು, ಅವರು ಪರಿಶೀಲನೆ ನಡೆಸಿದ ನಂತರವೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.