ADVERTISEMENT

ಹಿರೀಸಾವೆ | ಹೆಚ್ಚುತ್ತಿರುವ ಅಪಘಾತ: ರಸ್ತೆ ದಾಟಲು ಆತಂಕ

ಗನ್ನಿ ಬಸವೇಶ್ವರ ವೃತ್ತದಲ್ಲಿ ಅಂಡರ್‌ಪಾಸ್, ಬೀದಿ ದೀಪ ಅಳವಡಿಸಲು ಒತ್ತಾಯ

ಹಿ.ಕೃ.ಚಂದ್ರು
Published 11 ಸೆಪ್ಟೆಂಬರ್ 2024, 5:19 IST
Last Updated 11 ಸೆಪ್ಟೆಂಬರ್ 2024, 5:19 IST
ಹಿರೀಸಾವೆಯ ಗನ್ನಿ ಬಸವೇಶ್ವರ ವೃತ್ತ
ಹಿರೀಸಾವೆಯ ಗನ್ನಿ ಬಸವೇಶ್ವರ ವೃತ್ತ   

ಹಿರೀಸಾವೆ: ಇಲ್ಲಿನ ಗನ್ನಿ ಬಸವೇಶ್ವರ ವೃತ್ತದಲ್ಲಿ ಅಂಡರ್ ಪಾಸ್ ಮತ್ತು ರಾತ್ರಿ ಸಮಯದಲ್ಲಿ ಬೀದಿ ದೀಪದ ವ್ಯವಸ್ಥೆ ಇಲ್ಲದೇ ಇರುವುದರಿಂದ ಪಾದಚಾರಿಗಳು ಮತ್ತು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ರಾಷ್ಟ್ರೀಯ ಹೆದ್ದಾರಿ 75 ಅನ್ನು ದಾಟಬೇಕಿದೆ.

ಈ ಸರ್ಕಲ್‌ನಲ್ಲಿ ಆಗಾಗ ಅಪಘಾತಗಳು ಸಂಭವಿಸಿವೆ. ವರ್ಷಕ್ಕೆ ಐದರಿಂದ ಆರು ಜನರು ಪ್ರಾಣ ಕಳೆದಕೊಳ್ಳುತ್ತಿದ್ದಾರೆ. ಹಲವರು ಕೈಕಾಲು ಮುರಿದುಕೊಂಡಿದ್ದಾರೆ. ಈ ವೃತ್ತದ ಮೂಲಕ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಮತ್ತು ಹತ್ತಾರು ಹಳ್ಳಿಯ ಸಾರ್ವಜನಿಕರು ರಸ್ತೆ ದಾಟಬೇಕಿದೆ.

ಹಾಸನ ಜಿಲ್ಲೆಯ ಗಡಿ ಭಾಗದ ಹೋಬಳಿ ಕೇಂದ್ರವಾದ ಹಿರೀಸಾವೆ ಒಳಗೆ ಬರಲು ಮತ್ತು ಇಲ್ಲಿಂದ ಬೆಂಗಳೂರು ಕಡೆಗೆ ತೆರಳಲು, ಜನರು ಈ ವೃತ್ತವನ್ನು ದಾಟಿ ಹೋಗಬೇಕಿದೆ. ಮಂಡ್ಯ ಜಿಲ್ಲೆಯ ದೇವಿಹಳ್ಳಿಯಿಂದ ಹಾಸನದವರೆಗೆ 80 ಕಿ.ಮೀ. ಎರಡು ಪಥದ ರಸ್ತೆಯನ್ನು ಆರು ವರ್ಷಗಳ ಹಿಂದೆ ಚತುಷ್ಪಥದ ರಸ್ತೆಯಾಗಿ ಪರಿವರ್ತನೆ ಮಾಡಲಾಗಿದೆ. ಆದರೆ ಪ್ರಮುಖ ಗ್ರಾಮಗಳು ಮತ್ತು ವೃತ್ತಗಳ ಬಳಿ ಅಂಡರ್ ಪಾಸ್ ಮತ್ತು ಸರ್ವಿಸ್ ರಸ್ತೆಗಳನ್ನು ನಿರ್ಮಾಣ ಮಾಡಿಲ್ಲ.

ADVERTISEMENT

ರಾತ್ರಿ ಸಮಯದಲ್ಲಿ ಈ ಸ್ಥಳದಲ್ಲಿ ಹೆಚ್ಚು ಬೆಳಕು ಇಲ್ಲದೇ ಇರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಕಳೆದ ವರ್ಷ ನವೆಂಬರ್‌ನಲ್ಲಿ ರಾತ್ರಿ ನಡೆದ ಅಪಘಾತದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಇದು ಅಪಘಾತ ವಲಯ ಎಂಬ ಫಲಕಗಳನ್ನೂ ಅಳವಡಿಸಿಲ್ಲ ಎಂದು ಜನರು ದೂರುತ್ತಿದ್ದಾರೆ.

ಈ ವೃತ್ತವು ಹೆಚ್ಚು ಅಪಾಯಕಾರಿಯಾಗಿದ್ದು, ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಸಾರ್ವಜನಿಕರು ಹಲವು ಸಲ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸತೀಶ್ ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿಯವರು ಈ ವೃತ್ತಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಪಾಯಕಾರಿಯಾಗಿ ಪರಿಣಮಿಸಿದ ಹೆದ್ದಾರಿ ಸಂಚಾರ ನಿರಂತರ ರಸ್ತೆ ಅಪಘಾತ: ಜನರಲ್ಲಿ ಹೆಚ್ಚುತ್ತಿರುವ ಆತಂಕ ಅಂಡರ್‌ಪಾಸ್‌ ನಿರ್ಮಾಣಕ್ಕೆ ಸಾರ್ವಜನಿಕರ ಒತ್ತಾಯ

ಹೆದ್ದಾರಿಯಲ್ಲಿ ಮೇಲ್ಸೇತುವೆ ಸರ್ವಿಸ್ ರಸ್ತೆಗಳು ಮತ್ತು ಗನ್ನಿ ಬಸವೇಶ್ವರ ವೃತ್ತ ಸೇರಿದಂತೆ ಎಲ್ಲಡೆ ಬೀದಿ ದೀಪ ವ್ಯವಸ್ಥೆ ಇಲ್ಲದೆ ರಾತ್ರಿ ಸಮಯದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.
ಹಾರ್ಡ್‌ವೇರ್ ಕುಮಾರ್ ಹಿರೀಸಾವೆ.
ಹೆದ್ದಾರಿ ಪಕ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಿದ್ದರೂ ಚರಂಡಿ ನಿರ್ಮಿಸಿಲ್ಲ. ಹೆದ್ದಾರಿ–ಸರ್ವಿಸ್ ರಸ್ತೆ ನಡುವೆ ಅವೈಜ್ಞಾನಿಕ ಚರಂಡಿ ಮಾಡಿರುವುದರಿಂದ ಜನರಿಗೆ ಉಪಯೋಗವಾಗಿಲ್ಲ.
ಶೇಖರ್ ಹೋಟೆಲ್ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.