ADVERTISEMENT

ಕನ್ನಡ ಸಂಸ್ಕೃತಿ, ಪರಂಪರೆ ಉಳಿಸಲು ಶ್ರಮಿಸಿ: ಶಾಸಕ ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 13:48 IST
Last Updated 16 ಸೆಪ್ಟೆಂಬರ್ 2024, 13:48 IST
ಅರಸೀಕೆರೆಯ ಬಂದ ಕನ್ನಡ ರಥಕ್ಕೆ ಪಿ.ಪಿ. ವೃತ್ತದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ, ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರಮುಖರು ಸ್ವಾಗತಿಸಿದರು
ಅರಸೀಕೆರೆಯ ಬಂದ ಕನ್ನಡ ರಥಕ್ಕೆ ಪಿ.ಪಿ. ವೃತ್ತದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ, ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರಮುಖರು ಸ್ವಾಗತಿಸಿದರು   

ಅರಸೀಕೆರೆ: ಕರ್ನಾಟಕ ಸಂಭ್ರಮ -50 ಹೆಸರಿನಲ್ಲಿ ವರ್ಷಪೂರ್ತಿ ಕನ್ನಡ ಸಂಭ್ರಮ ಆಚರಿಸುವ ಕನ್ನಡ ಜ್ಯೋತಿ ರಥಯಾತ್ರೆ ಭಾನುವಾರ ನಗರಕ್ಕೆ ಬಂದಾಗ ನೂರಾರು ಕನ್ನಡ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.

‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೋಷವಾಕ್ಯದೊಂದಿಗೆ ಕನ್ನಡ ರಥ ನಗರದ ಪಿ.ಪಿ.ವೃತ್ತಕ್ಕೆ ಬಂದಾಗ ತಾಲ್ಲೂಕು ಆಡಳಿತ, ನಗರಸಭೆ ಆಡಳಿತ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ಕನ್ನಡಾಂಬೆಗೆ ಜೈ ಎಂದು ಘೋಷಣೆಗಳನ್ನು ಕೂಗಿ ಪೂರ್ಣಕುಂಭ ಸ್ವಾಗತ ಕೋರಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಭುವನೇಶ್ವರಿ ತಾಯಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ‘ಕನ್ನಡಿಗರು ಕನ್ನಡಾಭಿಮಾನದ ಜತೆಗೆ ಕನ್ನಡವನ್ನು ಬೆಳೆಸುವ ಉದ್ದೇಶದಿಂದ ಸರ್ಕಾರ ಕನ್ನಡ ಜ್ಯೋತಿ ರಥಯಾತ್ರೆ ಹಮ್ಮಿಕೊಂಡಿದೆ. ಕನ್ನಡ ನಾಡು ನುಡಿ ಭಾಷೆಗೆ ತನ್ನದೆಯಾದ ಶ್ರೀಮಂತಿಕೆ ಇದ್ದು ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ತಹಶೀಲ್ದಾರ್‌ ಎಂ.ಜಿ.ಸಂತೋಷಕುಮಾರ್‌, ನಗರಸಭಾಧ್ಯಕ್ಷ ಎಂ.ಸಮೀವುಲ್ಲಾ , ಉಪಾಧ್ಯಕ್ಷ ಮನೋಹರ್‌ ಮೇಸ್ತ್ರಿ, ಸದಸ್ಯ ವೆಂಕಟಮುನಿ, ಮಾಜಿ ಅಧ್ಯಕ್ಷ ಮನುಕುಮಾರ್‌, ತಾ.ಪಂ ಇ.ಒ ಸತೀಶ್‌, ನಗರಸಭಾ ಆಯುಕ್ತ ಕೃಷ್ಣಮೂರ್ತಿ, ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಶಂಕರಮೂರ್ತಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್‌ ಬಾಬು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.