ಅರಸೀಕೆರೆ: ‘ಮಹಾತ್ಮ ಗಾಂಧೀಜಿಯವರು ಗ್ರಾಮಗಳ ಸುಧಾರಣೆಯಿಂದ ದೇಶ ಅಭಿವೃದ್ಧಿ ಹಾಗೂ ಗ್ರಾಮ ರಾಜ್ಯವೆ ರಾಮರಾಜ್ಯ ಎಂಬ ಕನಸು ಕಂಡಿದ್ದನ್ನು ಶಾಸಕನಾಗಿ ಪ್ರತಿ ಹಂತದಲ್ಲೂ ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಮುಂದಾಗಿದ್ದೆನೆ’ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ತಾಲ್ಲೂಕಿನ ಕಾಚಿಘಟ್ಟ ಗ್ರಾಮದ ನೂತನ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಶಾಶ್ವತ ಮೂಲ ಸೌಕರ್ಯಗಳಿಗೆ ಸರ್ಕಾರದ ನಾನಾ ಯೋಜನೆಗಳ ಮೂಲಕ ಅನುದಾನ ತಂದು ಅಭಿವೃದ್ಧಿಗೊಳಿಸಿದ್ದೆನೆ. ಕಾಚಿಘಟ್ಟ ಗ್ರಾಮದ ಪಂಚಾಯಿತಿ ಕಚೇರಿಯ ಕಟ್ಟಡ ಶಿಥಿಲವಾಗಿದೆ ಎಂದು ಗ್ರಾ.ಪಂ ಸದಸ್ಯರು ಹೊಸ ಕಟ್ಟಡ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದ್ದರು. ಅವರ ಅಪೇಕ್ಷೆಯಂತೆ ನೂತನ ಕಟ್ಟಡವು ಮಂಜೂರು ಮಾಡಿಸಿದ್ದು ಬಹುದಿನದ ಬೇಡಿಕೆ ಈಡೇರಿದೆ. ಕೆಲವು ದಿನಗಳಲ್ಲಿ ಎತ್ತಿನಹೊಳೆ ಯೋಜನೆಯ ಮೂಲಕ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಿ ಕೃಷಿಕರ ಬದುಕು ಹಸನುಗೊಳಿಸುವುದಾಗಿ’ ಭರವಸೆ ನೀಡಿದರು.
ಮುಖಂಡ ಬಿಳಿಚೌಡಯ್ಯ ಮಾತನಾಡಿ, ‘ಶಾಸಕರ ಶ್ರಮದ ಫಲ ಹಾಗೂ ಸತತ ಹೋರಾಟದ ಫಲವಾಗಿ ಇಡೀ ಕ್ಷೇತ್ರ ಅಭಿವೃದ್ಧಿ ಆಗಿದೆ’ ಎಂದು ಹೇಳಿದರು.
ಗ್ರಾ.ಪಂ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ಸೋಮಣ್ಣ ಸದಸ್ಯರಾದ ಮೀನಾಕ್ಷಮ್ಮ, ಬಸವರಾಜು, ಮಹೇಶ, ಶಿವಶಂಕರ, ಪವಿತ್ರಾ ಮುಖಂಡರಾದ ಮಹಾಂತೇಶ, ಬಾಣಾವರ ಜಯಣ್ಣ, ರವಿಶಂಕರ್, ಸುರೇಶ, ಮೋಕ್ಷರಾಜು , ತಾ.ಪಂ ಇ.ಒ ಸತೀಶ್, ಪಿ.ಡಿ.ಒ ಕೊಟ್ರೇಶ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.