ADVERTISEMENT

ದೇವರಾಜೇಗೌಡ ವಿರುದ್ಧ ಕಾನೂನು ಹೋರಾಟ: ಎಂ.ಜಿ. ಪೂರ್ಣಚಂದ್ರ ತೇಜಸ್ವಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 14:10 IST
Last Updated 12 ಜನವರಿ 2024, 14:10 IST

ಹಾಸನ: ‘ಸಾಕ್ಷಿ -ಆಧಾರವಿಲ್ಲದೇ ನನ್ನ ವಿರುದ್ಧ ಆರೋಪ ಮಾಡಿರುವ ಮತ್ತು ಅಸಂಬದ್ಧ ಪದ ಪ್ರಯೋಗ ಮಾಡಿರುವ ವಕೀಲ ದೇವರಾಜೇಗೌಡ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು’ ಎಂದು ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ. ಪೂರ್ಣಚಂದ್ರ ತೇಜಸ್ವಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಜ್ವಲ್ ಹಾಗೂ ರೇವಣ್ಣ ಕುಟುಂಬದ ನ್ಯಾಯಾಲಯದಲ್ಲಿನ ಪ್ರಕರಣಗಳಲ್ಲಿ ಪೂರ್ಣಚಂದ್ರ ಅವರು ರಾಜಿ ಪಂಚಾಯಿತಿ ಮಾಡಲು ನನ್ನ ಬಳಿ ಬಂದಿದ್ದರು ಎಂದು ನೀಡಿರುವ ಹೇಳಿಕೆಗಳನ್ನು ಖಂಡಿಸುವುದಾಗಿ’ ತಿಳಿಸಿದರು.

‘ದೇವರಾಜೇಗೌಡ ಅವರು 2017 ರಿಂದ ವಕೀಲ ವೃತ್ತಿಯನ್ನು ಆರಂಭಿಸಿದ್ದಾರೆ. ಆದರೆ ನಾನು 2003 ವೃತ್ತಿ ಆರಂಭಿಸಿದ್ದೇನೆ. ಯಾವುದೇ ಆರೋಪ ಮಾಡಬೇಕಾದರೂ ಆಧಾರ ಇರಬೇಕು, ಸಾರ್ವಜನಿಕವಾಗಿ ನನ್ನ ವಿರುದ್ಧ ಹೇಳಿಕೆ ನೀಡಿರುವುದು ಕಾನೂನುಬಾಹಿರ’ ಎಂದರು.

ADVERTISEMENT

‘ಪ್ರಜ್ವಲ್ ರೇವಣ್ಣ ಅವರ ಪ್ರಕರಣ ಸಂಬಂಧ ರಾಜಿ ಮಾಡಲು ಬಂದಿದ್ದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಸೂಕ್ತ ದಾಖಲೆಯನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ ಅವರು, ‘ದೇವರಾಜೇಗೌಡ ಅವರ ಅಕ್ರಮ ಆಸ್ತಿ ಹಾಗೂ ಇತರೆ ಮಾಹಿತಿಯನ್ನು ಸೂಕ್ತ ದಾಖಲೆ ಸಮೇತ ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವುದಾಗಿ’ ತಿಳಿಸಿದರು.

‘ದೇವರಾಜೇಗೌಡ ವಿರುದ್ಧ ಸರ್ಕಾರಿ ಚಿಹ್ನೆಯನ್ನು ದುರ್ಬಳಕೆ ಮಾಡಿಕೊಂಡಿರುವ ಸಂಬಂಧ ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣಗಳು ವಿಚಾರಣೆಯಲ್ಲಿದ್ದು, ನನ್ನ ವಿರುದ್ಧ ಇಲ್ಲಸಲ್ಲದ ಅರೋಪ ಮಾಡುತ್ತಿದ್ದಾರೆ’ ಎಂದರು.

‘ಲಾರಿ ಚಾಲಕರಾಗಿದ್ದ ದೇವರಾಜೇಗೌಡರು 2017 ರಲ್ಲಿ ವಕೀಲ ವೃತ್ತಿ ಆರಂಭಿಸಿದ್ದು, ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಾಗ ₹77 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಇಷ್ಟು ಪ್ರಮಾಣದ ಹಣವನ್ನು ಹೇಗೆ ಸಂಪಾದಿಸಿದರು. ಈ ಸಂಬಂಧ ಕೇಂದ್ರದ ತೆರಿಗೆ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡುವಂತೆ ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ’ ಹೇಳಿದರು.

ವಕೀಲರಾದ ಲೋಕೇಶ್, ಸುದೀಪ್, ಯತೀಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.