ಹಾಸನ: ಬಿಜೆಪಿ–ಜೆಡಿಎಸ್ ಮೈತ್ರಿಕೂಟದಲ್ಲಿ ಪ್ರತಿಷ್ಠಿತ ಕ್ಷೇತ್ರವಾಗಿರುವ ಹಾಸನ ಲೋಕಸಭಾ ಕ್ಷೇತ್ರ ಜೆಡಿಎಸ್ಗೆ ಉಳಿಯುವುದು ಬಹುತೇಕ ನಿಶ್ಚಿತವಾಗಿದೆ. ಜೆಡಿಎಸ್ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇದಕ್ಕೆ ಪುಷ್ಟಿ ನೀಡುತ್ತಿವೆ. ಆದರೂ ಬಿಜೆಪಿ ಕೈ ಚೆಲ್ಲಿಲ್ಲ. ಈ ಕ್ಷೇತ್ರಕ್ಕಾಗಿ ಮೈತ್ರಿ ಪಕ್ಷಗಳ ನಡುವೆ ಜಟಾಪಟಿ ಮುಂದುವರಿದಿದೆ.
ಜಿಲ್ಲೆಯಲ್ಲಿ ಬಿಜೆಪಿ ದ್ವಂದ್ವದಲ್ಲಿ ಸಿಲುಕಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ನಾಯಕತ್ವ ಇಲ್ಲದಂ ತಾಗಿರುವ ಸ್ಥಿತಿಯಲ್ಲಿ ಕ್ಷೇತ್ರವನ್ನು ಬಿಟ್ಟುಕೊಡುವ ಮನಸ್ಥಿತಿಯಲ್ಲೂ ಇಲ್ಲ. ಜೆಡಿಎಸ್ ವಿರೋಧಿ ರಾಜಕಾರಣ ಮಾಡಿಕೊಂಡು ಬಂದಿದ್ದ ಪ್ರೀತಂ ಗೌಡರು, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ.
ಇದುವರೆಗೆ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಎಚ್.ಕೆ. ಸುರೇಶ್ ಬೇಲೂರಿನ ಶಾಸಕರಾಗಿದ್ದು, ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಆರಂಭದಲ್ಲಿ ಮೈತ್ರಿಗೆ ಅಪಸ್ವರ ಎತ್ತಿದ್ದ ಮಾಜಿ ಶಾಸಕರಾದ ಎ.ಟಿ. ರಾಮಸ್ವಾಮಿ, ಎಚ್.ಎಂ. ವಿಶ್ವನಾಥ ಕೂಡ ಮೌನಕ್ಕೆ ಜಾರಿದ್ದಾರೆ. ಜಿಲ್ಲಾ ಘಟಕದ ನೂತನ ಅಧ್ಯಕ್ಷ ಸಿದ್ಧೇಶ ನಾಗೇಂದ್ರ ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದಾರೆ.
ಇಷ್ಟೆಲ್ಲ ಬೆಳವಣಿಗೆಯ ನಡುವೆಯೂ, ಬಿಜೆಪಿ ಮುಖಂಡರು ಮಾತ್ರ ನಿರಾಶರಾಗದೇ, ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಸರ್ಕಾರದ ವಿರುದ್ಧ ಪ್ರತಿಭಟನೆ, ವಿವಿಧ ಮೋರ್ಚಾಗಳ ಸಭೆಗಳನ್ನು ನಡೆಸುವ ಮೂಲಕ ಕಾರ್ಯಕರ್ತರನ್ನು ಸಂಘಟಿಸುತ್ತಿದ್ದಾರೆ.
ಹಾಸನ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವ ಮನಸ್ಸು ಬಹುತೇಕ ಬಿಜೆಪಿ ನಾಯಕರಿಗೆ ಇಲ್ಲ. ಪ್ರೀತಂಗೌಡರು ಈಚೆಗೆ, ‘ಹಾಸನ, ಮಂಡ್ಯ ಕ್ಷೇತ್ರಗಳು ಬಿಜೆಪಿಗೆ ಸಿಗುವ ವಿಶ್ವಾಸವಿದೆ’ ಎಂದಿದ್ದರು. ಈಚೆಗೆ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಶಾಸಕ ಎಚ್.ಕೆ. ಸುರೇಶ್ ಕೂಡ, ‘ಹಾಸನ ಕ್ಷೇತ್ರವನ್ನು ಬಿಜೆಪಿಗೆ ಉಳಿಸಿಕೊಳ್ಳಬೇಕು’ ಎಂದು ಕೋರಿದ್ದರು.
ಕೇಂದ್ರ ನಾಯಕತ್ವದ ನಿರ್ಧಾರಕ್ಕೆ ಸಮ್ಮತಿ ಸೂಚಿಸಬೇಕಾದ ಅನಿವಾ ರ್ಯತೆಯೂ ಈ ಮುಖಂಡರ ಮುಂ ದಿದೆ. ಹೀಗಾಗಿ, ‘ಉಭಯ ಪಕ್ಷಗಳ ನಾಯಕರ ಮಾತುಕತೆ ನಡೆದ ಬಳಿಕ ವಷ್ಟೇ ಎಲ್ಲವೂ ಅಂತಿ ಮವಾಗಲಿದೆ. ಇದುವರೆಗೆ ಎನ್ಡಿಎ ಅಭ್ಯರ್ಥಿ ಘೋಷಣೆ ಮಾಡಿಲ್ಲ’ ಎನ್ನುತ್ತಿದ್ದಾರೆ.
‘ಹಾಸನ ಕ್ಷೇತ್ರವನ್ನು ಜೆಡಿಎಸ್ಗೆ ಉಳಿಸಿಕೊಳ್ಳಲು, ಎಚ್.ಡಿ.ದೇವೇಗೌಡರು ನೇರವಾಗಿ ಬಿಜೆಪಿ ಕೇಂದ್ರ ನಾಯಕರನ್ನೇ ಸಂಪರ್ಕಿಸಿ, ಅವರ ಮನವೊಲಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ದೇವೇಗೌಡರು, ಕಳೆದ ತಿಂಗಳು ಜೆಡಿಎಸ್ ನಿಯೋಗದೊಂದಿಗೆ ಅವರನ್ನು ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಆ ಬಗ್ಗೆ ಚರ್ಚೆ ನಡೆಸಿದ್ದರು’ ಎಂದು ಹೇಳಲಾಗುತ್ತಿದೆ.
ಜೊತೆಗೆ, ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಸಕ್ರಿಯವಾಗಿ ಚಟುವಟಿಕೆ ಆರಂಭಿಸಿದೆ. ದೇವೇಗೌಡರು ಎರಡು ಬಾರಿ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದು, ಕಾರ್ಯಕರ್ತರು, ಮುಖಂಡರಲ್ಲಿ ಒಗ್ಗಟ್ಟು ಮೂಡಿಸಲೆತ್ನಿಸಿದ್ದಾರೆ.
‘ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರೇ ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ’ ಎಂದು ಘೋಷಿಸಿದ್ದೂ ಆಗಿದೆ. ಕ್ಷೇತ್ರ ಜೆಡಿಎಸ್ಗೇ ಸಿಗುವ ವಿಶ್ವಾಸದಲ್ಲಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕೂಡ, ಕ್ಷೇತ್ರದ ಉಸ್ತುವಾರಿಯನ್ನಾಗಿ ಶಾಸಕ ಎಚ್.ಡಿ. ರೇವಣ್ಣ ಅವರನ್ನೇ ನಿಯೋಜಿಸಿದ್ದಾರೆ.
ಮೊಮ್ಮಗನ ಸ್ಪರ್ಧೆಗೆ ದೊಡ್ಡಗೌಡರ ಸಮ್ಮತಿ: ಎಚ್.ಡಿ. ರೇವಣ್ಣ ಉಸ್ತುವಾರಿಮೋದಿ ಮತ್ತೆ ಪ್ರಧಾನಿ ಆಗಲೆಂಬುದೇ ನಮ್ಮ ಆಶಯ. ಬಿಜೆಪಿ-ಜೆಡಿಎಸ್ ನಾಯಕರು ಒಟ್ಟಾಗಿ ಬಿಜೆಪಿಗೆ ಟಿಕೆಟ್ ನೀಡಬೇಕು. ಜೆಡಿಎಸ್ ಕಾರ್ಯಕರ್ತರು ಸಹಕರಿಸಬೇಕು.ಎಚ್.ಕೆ.ಸುರೇಶ್, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.