ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಕತ್ತರಿಘಟ್ಟ ಗ್ರಾಮದಲ್ಲಿ ವಿಳಾಸ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಕಳ್ಳರು, ಮನೆಯಲ್ಲಿದ್ದ ಯಜಮಾನಿಯ ಕತ್ತು ಹಿಸುಕಿ ಚಿನ್ನಾಭರಣ ಕಳವು ಮಾಡಲು ಯತ್ನಿಸಿದ್ದಾರೆ.
ಸೋಮವಾರ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಗ್ರಾಮದ ಸುಶೀಲಾ ಮನೆಯಲ್ಲಿದ್ದಾಗ ಅಪರಿಚಿತ ವ್ಯಕ್ತಿ ಮನೆಯ ಬಳಿ ಬಂದು ಬಾಗಿಲನ್ನು ತಟ್ಟಿದ್ದಾನೆ. ‘ಊಪಿನಹಳ್ಳಿ ರಾಜಣ್ಣನವರ ಮನೆ ಎಲ್ಲಿ’ ಎಂದು ಕೇಳಿದ್ದಾನೆ. ‘ನಮ್ಮ ಮನೆಯ ಹಿಂಭಾಗದಲ್ಲಿದೆ ಅವರನ್ನು ಕೇಳಿ’ ಎಂದು ಸುಶೀಲಾ ಉತ್ತರಿಸುತ್ತಿದ್ದಂತೆಯೇ ಕಾಂಪೌಂಡ್ನಿಂದ ಆಚೆಗೆ ನಿಂತಿದ್ದ 4 ಜನರು ಓಡಿ ಬಂದು ಮನೆಯ ಒಳಗೆ ನುಗ್ಗಿದ್ದಾರೆ.
ಇದರಿಂದ ಭಯಗೊಂಡ ಸುಶೀಲಾ ಅವರು ಕಿರುಚಿಕೊಂಡಿದ್ದು, ಇದರಿಂದ ಆತಂಕಗೊಂಡ ಕಳ್ಳರು ಸುಶೀಲಾ ಅವರ ಕುತ್ತಿಗೆಯನ್ನು ಹಿಸುಕಿದ್ದಾರೆ. ಪಂಚೆಯಿಂದ ಕುತ್ತಿಗೆಗೆ ಬಿಗಿಯಾಗಿ ಸುತ್ತಿ, ಉಸಿರುಗಟ್ಟುವಂತೆ ಮಾಡುತ್ತಿದ್ದರು. ಈ ವೇಳೆ ಸುಶೀಲಾ ಅವರ ಭಾವ ದೇವರಾಜೇಗೌಡರು ಮನೆಯ ಹತ್ತಿರ ಬಂದಿದ್ದಾರೆ.
ಇದನ್ನು ನೋಡಿದ ಎಲ್ಲರೂ ಮನೆಯಿಂದ ಆಚೆಗೆ ಓಡಿ ಬಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಚಿನ್ನಾಭರಣವನ್ನು ಇಟ್ಟಿದ್ದ ಮರದ ಬೀರುವಿನ ಹಿಡಿಯನ್ನು ಕಿತ್ತು ಮಂಚದ ಮೇಲೆ ಬಿಸಾಡಿದ್ದಾರೆ. ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ, ವಸ್ತುಗಳು ಕಳ್ಳತನವಾಗಿಲ್ಲ.
4 ಜನರು ಮಾಸ್ಕ್ ಹಾಕಿದ್ದು, ಒಬ್ಬನ ಕೈಯಲ್ಲಿ ಕಬ್ಬಿಣದ ರಾಡ್ ಇತ್ತು. ಮನೆಯಲ್ಲಿ ಹಣ, ಚಿನ್ನಾಭರಣ ದೋಚಲು ಬಂದಿದ್ದ ಕಳ್ಳರು, ಕುತ್ತಿಗೆ ಹಿಸುಕಿ ಸಾಯಿಸಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.