ADVERTISEMENT

ಹಳೇಬೀಡು: ಮುಖ್ಯ ಶಿಕ್ಷಕರ ಜೇಬಿಗೆ ಹೊರೆಯಾದ ಮೊಟ್ಟೆ

ಸರ್ಕಾರದಿಂದ ₹6 ಅನುದಾನ: ಹೆಚ್ಚಿನ ಬೆಲೆ ಕೊಟ್ಟು ಖರೀದಿ

ಎಚ್.ಎಸ್.ಅನಿಲ್ ಕುಮಾರ್
Published 9 ಅಕ್ಟೋಬರ್ 2024, 7:23 IST
Last Updated 9 ಅಕ್ಟೋಬರ್ 2024, 7:23 IST
ಹಳೇಬೀಡು ಸಮೀಪದ ಹರುಬಿಹಳ್ಳಿ ಶಾಲೆಯಲ್ಲಿ ಮೊಟ್ಟೆ ಸೇವಿಸುತ್ತಿರುವ ಮಕ್ಕಳು.
ಹಳೇಬೀಡು ಸಮೀಪದ ಹರುಬಿಹಳ್ಳಿ ಶಾಲೆಯಲ್ಲಿ ಮೊಟ್ಟೆ ಸೇವಿಸುತ್ತಿರುವ ಮಕ್ಕಳು.   

ಹಳೇಬೀಡು: ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಬೇಯಿಸಿದ ಕೋಳಿ ಮೊಟ್ಟೆ ಕೊಡುವ ಪ್ರಕ್ರಿಯೆ ಆರಂಭವಾಗಿದ್ದು, ಇದೀಗ ಮುಖ್ಯಶಿಕ್ಷಕರ ಜೇಬಿಗೆ ಹೊರೆಯಾಗಿ ಪರಿಣಮಿಸಿದೆ. ಶಾಲೆಗಳಿಗೆ ಸರ್ಕಾರದಿಂದ ಕೊಡುತ್ತಿರುವ ಅನುದಾನ ಸಾಕಾಗದೇ ಮುಖ್ಯಶಿಕ್ಷಕರು ಹೆಚ್ಚುವರಿ ಹಣ ಹೊಂದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಲಾಭಿವೃದ್ಧಿ ಸಮಿತಿ ಹಾಗೂ ಮುಖ್ಯಶಿಕ್ಷಕರ ಜಂಟಿ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಹಣ ತುಂಬಲಾಗುತ್ತಿದೆ. ಒಂದು ಮೊಟ್ಟೆಗೆ ₹6 ರಂತೆ ಸರ್ಕಾರ ಪಾವತಿಸುತ್ತಿದೆ. ₹6ರಲ್ಲಿಯೇ ಇಂಧನ ವೆಚ್ಚ 30ಪೈಸೆ, ಮೊಟ್ಟೆಯ ಗಟ್ಟಿ ಪದರ ವೋಡು ತೆಗೆಯಲು 30ಪೈಸೆ, ಸಾಗಾಟ ವೆಚ್ಚ 20ಪೈಸೆ ಬಳೆಸಬೇಕಾಗಿದೆ. ಉಳಿದ ₹5.20ರಲ್ಲಿಯೇ ಮೊಟ್ಟೆ ಖರೀದಿಸುವ ಪರಿಸ್ಥಿತಿ ಎದುರಾಗಿದೆ.  ಒಂದು ಮೊಟ್ಟೆಗೆ ಕನಿಷ್ಠ ₹7 ಕೊಟ್ಟರೆ ಮುಖ್ಯಶಿಕ್ಷಕರಿಗೆ ಹೊರೆ ಆಗುವುದಿಲ್ಲ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌.ಬಿ. ಪಾಲಾಕ್ಷ ಹೇಳುತ್ತಾರೆ.

ಮಾರುಕಟ್ಟೆಯಲ್ಲಿ ಒಂದು ಮೊಟ್ಟೆ ಬೆಲೆ ₹5.80ರಿಂದ ₹6.20ರವರೆಗೂ ಏರಿಕೆ ಆಗುತ್ತಿರುತ್ತದೆ. ಮೊಟ್ಟೆ ಬೆಲೆ ದಿನದಿಂದ ದಿನಕ್ಕೆ ವಿಭಿನ್ನವಾಗಿರುತ್ತದೆ. ಸರ್ಕಾರ ಕೊಡುವ ಅನುದಾನದಲ್ಲಿ ಮೊಟ್ಟೆ ಖರೀದಿ ಕಷ್ಟವಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಮುಖ್ಯಶಿಕ್ಷಕರು‌ ಹೇಳುತ್ತಾರೆ.   

ADVERTISEMENT

ಸರ್ಕಾರದಿಂದ ವಾರದಲ್ಲಿ ಎರಡು ದಿನ ಮೊಟ್ಟೆ ವಿತರಣೆ ಮಾಡಲಾಗುತ್ತಿತ್ತು. ಈಗ ಅಜೀಂ ಪ್ರೇಮ್‌ಜೀ ಫೌಂಡೇಶನ್ ನೆರವಿನಿಂದ ವಾರದಲ್ಲಿ 6 ದಿನವೂ ಮೊಟ್ಟೆ ವಿತರಿಸಲಾಗುತ್ತಿದೆ. ಅನುದಾನ ಹೆಚ್ಚಿಸಿ ಮುಖ್ಯ ಶಿಕ್ಷಕರಿಗೆ ಆಗಿರುವ ಹೊರೆ ತಪ್ಪಿಸಬೇಕು ಎನ್ನುತ್ತಾರೆ ಪೋಷಕ ಅಡುಗೆ ರಾಜು.

ಮಕ್ಕಳು ಅಪೌಷ್ಟಿಕತೆಗೆ ಒಳಗಾಗಬಾರದು. ಬೆಳೆಯುವ ಹಂತದಲ್ಲಿ ಪೌಷ್ಟಿಕ  ಆಹಾರ ಅಗತ್ಯವಿದೆ. ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಕೊಡಬೇಕು ಎಂಬುದು ಒಳ್ಳೆಯ ಬೆಳವಣಿಗೆ. ಬಾಳೆಹಣ್ಣಿನ ಬೆಲೆಯೂ ಮಾರುಕಟ್ಟೆಯಲ್ಲಿ ನಿಖರವಾಗಿರುವುದಿಲ್ಲ. ಕೆಲಸ ಮಾಡಲು ಸಮಸ್ಯೆ ಇಲ್ಲ. ಆರ್ಥಿಕ ಹೊರೆಯಿಂದ ನಮ್ಮನ್ನು ಪಾರು ಮಾಡಬೇಕಾಗಿದೆ ಎಂಬ ಅಳಲು ಮುಖ್ಯಶಿಕ್ಷಕರಿಂದ ಕೇಳಿ ಬರುತ್ತಿದೆ.  

ಮೊಟ್ಟೆ ವಿತರಣೆಯನ್ನು ಟೆಂಡರ್ ಕರೆದು ಪೂರೈಕೆಯ ಜವಾಬ್ದಾರಿಯನ್ನು ಬಿಡ್‌ದಾರರಿಗೆ ವಹಿಸಬೇಕು. ಶಿಕ್ಷಕ ವರ್ಗ ಬೋಧನೆಯಲ್ಲಿ ತೊಡಗಿಕೊಳ್ಳಲು ಅನುಕೂಲ ಕಲ್ಪಿಸಬೇಕು.
–ಟಿ.ಬಿ.ಹಾಲಪ್ಪ, ರೈತ ಮುಖಂಡ
ಮೊಟ್ಟೆ ವಿತರಣೆಯನ್ನು ಅಂಗನವಾಡಿ ಮಾದರಿಯಲ್ಲಿ ಸರ್ಕಾರದಿಂದ ನಿರ್ವಹಿಸಿದರೆ ಅನುಕೂಲ ಆಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕಾಗಿದೆ.
–ಎಸ್.ಬಿ.ಪಾಲಾಕ್ಷ, ಪ್ರಾಥಮಿಕ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ
ಅನುದಾನಕ್ಕಿಂತ ಹೆಚ್ಚಿನ ಹಣ ಖರ್ಚಾಗುತ್ತಿರುವುದು ಗಮನಕ್ಕೆ ಬಂದಿದ್ದು ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಹೆಚ್ಚುವರಿ 50 ಪೈಸೆ ಮಂಜೂರಾಗುವ ಸಾಧ್ಯತೆ ಇದೆ.
–ವಿ.ಎನ್.ಧನಂಜಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.