ಕೊಣನೂರು (ಹಾಸನ ಜಿಲ್ಲೆ): ಸಮೀಪದ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಸೋಮವಾರ ಶಾಸಕ ಎ.ಮಂಜು ಹಾಗೂ ಕಾಂಗ್ರೆಸ್ ಮುಖಂಡ, ಕಳೆದ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಶ್ರೀಧರ್ಗೌಡ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದ ಶಾಸಕರು, ತಂಬಾಕು ಬೆಳೆಗಾರರೊಂದಿಗೆ ಮಾತನಾಡುತ್ತಾ, ‘ಮಧ್ಯವರ್ತಿಗಳು ತಂಬಾಕು ಬೆಳೆಗಾರರಿಗೆ ಮೋಸ ಮಾಡಬೇಡಿ’ ಎಂದು ಹೇಳಿ, ಮೋಸ ಮಾಡುವವರನ್ನು ಕುರಿತು ಅವಾಚ್ಯ ಪದವೊಂದನ್ನು ಬಳಸಿದರು.
ಸ್ಥಳದಲ್ಲಿದ್ದ ಶ್ರೀಧರ್ಗೌಡ, ‘ರೈತರಿಗೆ ಏಕೆ ಅವಾಚ್ಯ ಪದ ಬಳಸುತ್ತೀರಿ’ ಎಂದು ಪ್ರಶ್ನಿಸಿದರು. ‘ನಾನು ರೈತರಿಗೆ ಅಂದಿಲ್ಲ. ನನ್ನನ್ನು ಕೇಳಲು ನೀನ್ಯಾರು’ ಎಂದು ಮಂಜು ಏರುದನಿಯಲ್ಲೇ ತಿರುಗೇಟು ನೀಡಿದರು.
ಆ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ವಾಗ್ವಾದ ತಾರಕಕ್ಕೇರಿ, ಮಂಜು ಅವರನ್ನು ಕುರಿತು ಶ್ರೀಧರ್ಗೌಡ ಅವಾಚ್ಯ ಪದ ಬಳಸಿದರು. ಸಿಟ್ಟಾದ ಮಂಜು, ಕೈ ತೋರಿಸಿ ಆಕ್ರೋಶ ಹೊರಹಾಕಿದರು. ಇಬ್ಬರು ನಾಯಕರ ಬೆಂಬಲಿಗರ ನಡುವೆಯೂ ವಾಗ್ವಾದ, ನೂಕಾಟ- ತಳ್ಳಾಟ ಶುರುವಾಗಿ, ನೋಡುತ್ತಿದ್ದಂತೆಯೇ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು, ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.