ADVERTISEMENT

ಅಧಿಕಾರ ಶಾಶ್ವತವಲ್ಲ, ಜನಪರ ಕೆಲಸ ಶಾಶ್ವತ: ಸಿ.ಎನ್. ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 15:33 IST
Last Updated 23 ಜೂನ್ 2024, 15:33 IST
ಚನ್ನರಾಯಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವ ಮತ್ತು ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವವನ್ನು ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿದರು. ಮಲ್ಲಿಕಾರ್ಜುನ ಮಹಾಸ್ವಾಮಿ, ಮಹೇಶ್ವರಶಿವಾಚಾರ್ಯ ಮಹಾಸ್ವಾಮಿ, ಎನ್. ಪರಮೇಶ್, ಶಿವಾನಂದ ತಗಡೂರು ಭಾಗವಹಿಸಿದ್ದರು
ಚನ್ನರಾಯಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವ ಮತ್ತು ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವವನ್ನು ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿದರು. ಮಲ್ಲಿಕಾರ್ಜುನ ಮಹಾಸ್ವಾಮಿ, ಮಹೇಶ್ವರಶಿವಾಚಾರ್ಯ ಮಹಾಸ್ವಾಮಿ, ಎನ್. ಪರಮೇಶ್, ಶಿವಾನಂದ ತಗಡೂರು ಭಾಗವಹಿಸಿದ್ದರು   

ಚನ್ನರಾಯಪಟ್ಟಣ: ‘ಅಧಿಕಾರ, ಹಣ ಶಾಶ್ವತವಲ್ಲ. ಜೀವಿತಾವಧಿಯಲ್ಲಿ ಜನಪರ ಕೆಲಸ ಮಾಡುವುದು ಜನರ ಮನಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ ಭಾನುವಾರ ಏರ್ಪಡಿಸಿದ್ದ ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವ, ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವ ಹಾಗು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

‘ಬಸವಣ್ಣ ಕಾಯಕವೇ ಕೈಲಾಸ ಎಂಬ ಪರಿಕಲ್ಪನೆ ಮೂಲಕ ನಾವು ಮಾಡುವ ಕೆಲಸದಲ್ಲಿ ನಿಷ್ಠೆ, ಪ್ರಾಮಾಣಿಕತೆಯಿಂದ ಇರಬೇಕು ಎಂಬ ಸಂದೇಶ ಸಾರಿದರು. ನಾವು ಮಾಡುವ ಸೇವೆ ಸಕಾರಾತ್ಮಕವಾಗಿದ್ದರೆ ಬದುಕಿನಲ್ಲಿ ನೆಮ್ಮದಿ ಲಭಿಸುತ್ತದೆ. ಅನುಭವ ಮಂಟಪ ಸ್ಥಾಪನೆಯಿಂದ ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದರು’ ಎಂದು ಹೇಳಿದರು.

ADVERTISEMENT

‘ತಾಲ್ಲೂಕಿನ ನವಿಲೆ ಗ್ರಾಮದಲ್ಲಿ ಅಂದಾಜು ₹5 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಾಣ, ಚನ್ನರಾಯಪಟ್ಟಣದ ಅರಳೆಪೇಟೆಯಲ್ಲಿ ಬಸವೇಶ್ವರ ದೇಗುಲದ ಮುಂಭಾಗ ಶೆಲ್ಟರ್ ನಿರ್ಮಿಸಲಾಗುವುದು. ಇದರಿಂದ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ನಿವೃತ್ತ ಉಪನ್ಯಾಸಕ ವೀರಭದ್ರಪ್ಪ, ಕಾಂಗ್ರೆಸ್ ಮುಖಂಡ ಎಂ.ಎ. ಗೋಪಾಲಸ್ವಾಮಿ ಮಾತನಾಡಿದರು.
ಬೆಂಗಳೂರಿನ ಸರ್ಪ ಭೂಷಣ ಮಠದ ಮಲ್ಲಿಕಾರ್ಜುನ ಮಹಾಸ್ವಾಮಿ ಆಶೀರ್ವಚನ ನೀಡಿದರು. ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮಿ ಆಶೀರ್ವಚನ ನೀಡಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಆರ್. ಗುರುದೇವ್, ಪದಾಧಿಕಾರಿ ಸುಧಾ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ತಾಲ್ಲೂಕು ಘಟಕದ ಅಧ್ಯಕ್ಷ ಎನ್. ಪರಮೇಶ್ ಮಾತನಾಡಿದರು. ಖಜಾಂಚಿ ಎಂ.ಎಸ್. ಸುರೇಶ್, ಪುರಸಭಾಸದಸ್ಯೆ ರಾಣಿ, ತಾಲ್ಲೂಕು ಪಂಚಾಯಿತಿಮಾಜಿ ಸದಸ್ಯ ಬೆಳಗಿಹಳ್ಳಿ ಪುಟ್ಟಸ್ವಾಮಿ. ಕಾಂಗ್ರೆಸ್ ಮುಖಂಡ ಸಿ.ಎಸ್. ಯುವರಾಜ್, ಸಮಾಜಸೇವಕ ಸಿ.ಎಸ್. ಮನೋಹರ್ ಭಾಗವಹಿಸಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನಾ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.