ಅರಕಲಗೂಡು: ಮೃತಪಟ್ಟ ವ್ಯಕ್ತಿಯ ಶವವನ್ನು ಕೊಡದ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಇಲ್ಲಿನ ತಾಲ್ಲೂಕು ಆಸ್ಪತ್ರೆ ಎದುರು ಶನಿವಾರ ಪತ್ರಿಭಟನೆ ನಡೆಸಿದರು.
ತಾಲ್ಲೂಕಿನ ದಡದಹಳ್ಳಿ ನಿವಾಸಿ ರವಿ ಅವರಿಗೆ ಶನಿವಾರ ಬೆಳ್ಳಿಗ್ಗೆ 8.30 ಕ್ಕೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆತರುವಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ. ನಂತರ ರವಿ ಅವರನ್ನು ಆಸ್ಪತ್ರೆಗೆ ಕರೆತಂದು ಡಾ. ಮಂಜುನಾಥ್ ಅವರಿಗೆ ತೋರಿಸಲಾಯಿತು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.
ರಾತ್ರಿ ಕರ್ತವ್ಯ ಮುಗಿಸಿದ ಡಾ.ಮಂಜುನಾಥ, ಎಂಎಲ್ಸಿಯಲ್ಲಿ ದಾಖಲಿಸಿ, ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟು ಮನೆಗೆ ತೆರಳಿದ್ದರು. ನಂತರ ಬಂದ ಬೇರೆ ವ್ಯೆದ್ಯರು, ಇದನ್ನು ಗಮನಕ್ಕೆ ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದು, ಶವ ನೀಡಲು ವಿಳಂಬ ಮಾಡಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಶವ ಕೊಡುವಂತೆ ವ್ಯೆದ್ಯ ಡಾ. ರವೀಸ್ ಅವರನ್ನು ಕುಟುಂಬದವರು ಕೇಳಿದ್ದು, ಶವ ಪರೀಕ್ಷೆ ಮಾಡದೇ ಶವ ಕೊಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಇದೊಂದು ಸ್ವಾಭಾವಿಕ ಸಾವು. ಮರಣೋತ್ತರ ಪರೀಕ್ಷೆ ಬೇಡ. ಶವವನ್ನು ಕೊಡುವಂತೆ ತಂದೆ, ತಾಯಿ, ತಮ್ಮ, ಹೆಂಡತಿ ಸೇರಿದಂತೆ ಕುಟುಂಬದವರು ಆಗ್ರಹಿಸಿದರು.
ಆದರೆ, ಶವ ನೀಡದಿದ್ದಾಗ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಾಗರಾಜು ನೇತೃತ್ವದಲ್ಲಿ ಸುಮಾರು 30 ಜನರು, ಕುಟುಂಬದವರ ಜೊತೆ ಸೇರಿ ಪ್ರತಿಭಟನೆ ಆರಂಭಿಸಿದರು. ಶವ ಪರೀಕ್ಷೆ ಮಾಡದೇ ಶವವನ್ನು ಹಸ್ತಾಂತರ ಮಾಡುವಂತೆ ಒತ್ತಾಯಿಸಿದರು.
ಸ್ಥಳಕ್ಕೆ ಬಂದ ಕಾಂಗ್ರೆಸ್ ಮುಖಂಡ ಶ್ರೀಧರ್ ಗೌಡ ಮತ್ತು ಪೋಲೀಸರು, ತಾಲ್ಲೂಕು ಆಡಳಿತ ವ್ಯೆದ್ಯಾಧಿಕಾರಿಗಳ ಜೊತೆ ಚರ್ಚಿಸಿದರು. ನಂತರ ವೈದ್ಯರು ಶವ ನೀಡಲು ಒಪ್ಪಿದ್ದು, ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.