ADVERTISEMENT

ಅರಕಲಗೂಡು | ಬಾಡುತ್ತಿದ್ದ ಬೆಳೆಗೆ ಮಳೆ ವರದಾನ; ಕೃಷಿಕರಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 13:26 IST
Last Updated 27 ಜೂನ್ 2024, 13:26 IST
ಅರಕಲಗೂಡು ತಾಲ್ಲೂಕಿನಲ್ಲಿ ಸೋನೆ ಮಳೆಯಾಗುತ್ತಿದ್ದು ಒಣಗುತ್ತಿದ್ದ ಹೊಗೆಸೊಪ್ಪು ಬೆಳೆ ನಳನಳಿಸುತ್ತಿದೆ
ಅರಕಲಗೂಡು ತಾಲ್ಲೂಕಿನಲ್ಲಿ ಸೋನೆ ಮಳೆಯಾಗುತ್ತಿದ್ದು ಒಣಗುತ್ತಿದ್ದ ಹೊಗೆಸೊಪ್ಪು ಬೆಳೆ ನಳನಳಿಸುತ್ತಿದೆ   

ಅರಕಲಗೂಡು: ತಾಲ್ಲೂಕಿನಲ್ಲಿ ಗುರುವಾರ ಸುರಿದ ಮಳೆಗೆ ಒಣಗುತ್ತಿದ್ದ ಬೆಳೆಗಳು ಚೇತರಿಕೆ ಕಾಣಲಾರಂಭಿಸಿವೆ.

ಕಳೆದ ಎರಡು ದಿನಗಳಿಗಳಿಂದ ಮೋಡ ಕವಿದು ಬೀಳುತ್ತಿದ್ದ ಸೋನೆ ಮಳೆ ಒಂದಿಷ್ಟು ಬಿರುಸು ಪಡೆದುಕೊಂಡಿದೆ. ವರುಣನ ಕೃಪೆಯಿಂದಾಗಿ ನೀರಿಲ್ಲದೆ ಒಣಗಿ ಹಾಳಾಗುತ್ತಿದ್ದ ಬೆಳೆಗಳಿಗೆ ಜೀವ ಕಳೆ ಬರಲಾರಂಭಿಸಿದ್ದು, ಅನ್ನದಾತರ ಸಂತಸಕ್ಕೆ ಕಾರಣವಾಗಿದೆ.

ಮುಂಗಾರು ಪೂರ್ವ ಮಳೆಗೆ ರೈತರು ಕೃಷಿ ಭೂಮಿ ಹದಗೊಳಿಸಿಕೊಂಡು ಬಿತ್ತನೆ ಕಾರ್ಯ ಕೈಗೊಂಡಿದ್ದರು. ಪ್ರಮುಖ ವಾಣಿಜ್ಯ ಬೆಳೆಗಳಾದ ತಂಬಾಕು, ಶುಂಠಿ, ಆಲೂಗಡ್ಡೆ, ಮುಸುಕಿನ ಜೋಳದ ಬೆಳೆಗಳಿಗೆ ಮಳೆ ವರದಾನವಾಗಿತ್ತು. ತದನಂತರ ಕಳೆದ ಕೆಲ ವಾರಗಳಿಂದ ಮಾಯವಾಗಿದ್ದ ಮಳೆ ಇದೀಗ ಬೀಳುತ್ತಿರುವುದರಿಂದ ನೀರಿಲ್ಲದೇ ಬತ್ತಿ ಬಾಡುತ್ತಿದ್ದ ಬೆಳೆಗಳಿಗೆ ವರದಾನವಾಗಿದೆ. ಬಿತ್ತಿದ ಬೆಳೆಗಳಲ್ಲಿ ಕಳೆ ತೆಗೆದು ರಸಗೊಬ್ಬರ ನೀಡಿ ಬೆಳೆಗಳ ಬೆಳವಣಿಗೆಗೆ ಮಳೆ ಅನುಕೂಲಕರವಾಗಿ ಪರಿಣಮಿಸಿದೆ.

ADVERTISEMENT

ಬೆಳೆ ಹಾನಿ: ಈ ಬಾರಿಯ ಬರಗಾಲದ ನಡುವೆಯೂ ಕಳೆದ ತಿಂಗಳು ಒಂದು ವಾರಗಳ ಕಾಲ ಸತತವಾಗಿ ಸುರಿದ ಮಳೆಗೆ ಕೃಷಿ ಜಮೀನು ಜಲಾವೃತಗೊಂಡಿತ್ತು. ಕೆಲವು ಕಡೆ ನಾಟಿ ಮಾಡಿದ ತಂಬಾಕು ಹೊಲಗಳಲ್ಲಿ ನೀರು ನಿಂತು ಗಿಡಗಳು ಮುಳುಗಿ ಬೆಳೆ ನಾಶವಾಗಿತ್ತು.

ಕಟಾವಿಗೆ ಅಡ್ಡಿ: ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮೊದಲ ಹಂತದಲ್ಲಿ ನೀರಾವರಿ ಜಮೀನಿನಲ್ಲಿ ನಾಟಿ ಮಾಡಿದ ತಂಬಾಕು ಗಿಡಗಳು ಕಟಾವಿನ ಹಂತಕ್ಕೆ ಬಂದಿವೆ. ಹೀಗಾಗಿ ನೀರಾವರಿ ಜಮೀನು ವ್ಯಾಪ್ತಿಯಲ್ಲಿ ರೈತರು ಹೊಗೆಸೊಪ್ಪು ಕಟಾವು ಕಾರ್ಯ ಆರಂಭಿಸಿದ್ದಾರೆ. ಗುರುವಾರ ಸುರಿದ ಸೋನೆ ಮಳೆಯನ್ನು ಲೆಕ್ಕಿಸದೆ ರೈತರು ತಂಬಾಕು ಕಟಾವು ಕಾರ್ಯ ಕೈಗೊಂಡಿದ್ದು ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.