ಹಾಸನ: ಜಿಲ್ಲೆಗೆ ನಿಗದಿಯಾಗಿದ್ದ 22 ಸಾವಿರ ಟನ್ ಕೊಬ್ಬರಿ ಖರೀದಿಯ ಮಿತಿ ಪೂರ್ಣವಾಗುತ್ತಿದ್ದಂತೆಯೇ ನೋಂದಣಿ ಪ್ರಕ್ರಿಯೆ ಶುಕ್ರವಾರ ಮಧ್ಯಾಹ್ನ ಸ್ಥಗಿತವಾಯಿತು. ನೋಂದಣಿ ಸಾಧ್ಯವಾಗದವರು, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾ ಮನೆಗೆ ಮರಳಿದರು.
ಅರಸೀಕೆರೆಯಲ್ಲಿ ಬೆಳಿಗ್ಗೆಯಿಂದಲೇ ನೂಕುನುಗ್ಗಲು ಉಂಟಾಗಿತ್ತು. ಶಾಸಕ ಕೆ.ಎಂ.ಶಿವಲಿಂಗೇಗೌಡ, ಕೈಯಲ್ಲಿ ಲಾಠಿ ಹಿಡಿದು, ಜನರನ್ನು ನಿಯಂತ್ರಿಸಿದರು. ಹಿರೀಸಾವೆ, ನುಗ್ಗೇಹಳ್ಳಿ, ಚನ್ನರಾಯಪಟ್ಟಣ, ಉದಯಪುರ, ಗಂಡಸಿಯಲ್ಲಿ ರೈತರು ಸರದಿಯಲ್ಲಿ ನಿಂತಿದ್ದರು.
ಮಾರ್ಚ್ 4ರಿಂದ ಆರಂಭವಾಗಿದ್ದ ನೋಂದಣಿ ಐದು ದಿನ ನಡೆದಿದ್ದು, 18,879 ರೈತರು ಒಟ್ಟು 22,092 ಟನ್ ಕೊಬ್ಬರಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡರು.
ಶುಕ್ರವಾರ ಶಿವರಾತ್ರಿ ಹಬ್ಬವಿದ್ದರೂ ರೈತರು ನೋಂದಣಿ ಕೇಂದ್ರಗಳಲ್ಲಿಯೇ ಉಳಿದಿದ್ದರು. ಗುರುವಾರವೇ ನೋಂದಣಿ ಮುಗಿಯುವ ಸೂಚನೆ ನೀಡಲಾಗಿತ್ತು. ‘ಕೊನೆಯ ಕ್ಷಣದಲ್ಲಾದರೂ ನೋಂದಣಿಯಾಗಲಿ’ ಎಂದು ಕಾದಿದ್ದ ಬಹುತೇಕ ರೈತರು ನಿರಾಸೆ ಅನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.