ಹಾಸನ: ‘ಎರಡು ಮೂರು ದಿನ ಸಮಯ ಕೊಡಿ. ಸಕಾರಾತ್ಮಕವಾಗಿ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ. ಕೆಲವೇ ದಿನಗಳಲ್ಲಿ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಆಗಲಿದ್ದು, ಹಾಸನ ಅಭ್ಯರ್ಥಿ ಹೆಸರು ಕೂಡ ಇರುತ್ತದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ನಗರಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ನನಗೆ ರಾಜಕೀಯವಾಗಿ ಅಗ್ನಿಪರೀಕ್ಷೆ ಇದೆ. ಅರ್ಥ ಮಾಡಿಕೊಳ್ಳಿ. ಅನಾರೋಗ್ಯ ನಡುವೆಯೂ ನಿತ್ಯ 18 ಗಂಟೆ ಕೆಲಸ ಮಾಡುತ್ತಿದ್ದೇನೆ. ಈಗಾಗಲೇ ರಾಜ್ಯದ 20 ಜಿಲ್ಲೆಗಳಲ್ಲಿ ನಾನು ಪ್ರವಾಸ ಮಾಡಿದ್ದೇನೆ’ ಎಂದರು.
‘ಸ್ವತಂತ್ರವಾಗಿ ಜೆಡಿಎಸ್ ಸರ್ಕಾರ ರಚಿಸಲು ಜನರು ನಿರ್ಧರಿಸಿದ್ದಾರೆ. ಹಾಸನ ಟಿಕೆಟ್ ವಿಚಾರವಾಗಿ ಪಕ್ಷ ಹಾಳು ಮಾಡಲು ತಯಾರಿದ್ದೀರಾ’ ಎಂದು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಸ್ವರೂಪ್ ಬೆಂಬಲಿಗರು ಕೂಗಾಟ ಆರಂಭಿಸಿದರು. ಇದರಿಂದ ಸಿಟ್ಟಿಗೆದ್ದ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
‘ನನ್ನ ಧ್ವನಿ ಇನ್ನೂ ಎರಡು ತಿಂಗಳು ಇರಬೇಕು. ನನ್ನ ಆರೋಗ್ಯ ಹಾಳಾದರೆ, ನೀವು ಬರ್ತೀರಾ. ನೀವು ಇಲ್ಲಿ ಸ್ವರೂಪನನ್ನು ಗೆಲ್ಲಿಸಲು ಬಂದಿಲ್ಲ. ಸ್ವರೂಪ ಮನೆ ಹಾಳು ಮಾಡಲು ಬಂದಿದ್ದೀರಾ’ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ‘ನಾನು ಯಾವುದೇ ತಪ್ಪು ನಿರ್ಧಾರ ತೆಗೆದುಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.