ಹೊಳೆನರಸೀಪುರ: ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಪರವಾಗಿ ದೂರು ಸಲ್ಲಿಸಿದ್ದ, ಹನುಮನಹಳ್ಳಿಯ ಶಿವಕುಮಾರ್, ಮಂಗಳವಾರ ಇಲ್ಲಿನ ನಗರ ಠಾಣೆಯಲ್ಲಿ ಸೂರಜ್ ವಿರುದ್ಧವೇ ದೂರು ದಾಖಲಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಠಾಣೆಗೆ ಬಂದು ದೂರು ಕೊಟ್ಟ ಬಳಿಕ ಮಾತನಾಡಿ, ‘ನನಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ದೂರು ದಾಖಲಿಸಿದ್ದೇನೆ’ ಎಂದು ಹೇಳಿದರು. ಅಷ್ಟರೊಳಗೆ ಪೊಲೀಸರು ಅವರನ್ನು ಜೀಪಿನಲ್ಲಿ ಹತ್ತಿಸಿಕೊಂಡು ಗ್ರಾಮಾಂತರ ಠಾಣೆಯತ್ತ ತೆರಳಿದರು.
‘ಡಾ.ಸೂರಜ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ’ ಎಂದು ಸಂತ್ರಸ್ತ ಖಾಸಗಿ ವಾಹಿನಿಯಲ್ಲಿ ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ, ಜೂನ್ 21 ರಂದು ಶಿವಕುಮಾರ್, ‘ಸಂತ್ರಸ್ತ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ಕೊಡದಿದ್ದರೆ ಮಾನ ಹರಾಜು ಹಾಕುವುದಾಗಿ ಬೆದರಿಕೆ ಹಾಕಿದ್ದ’ ಎಂದು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
22 ರಂದು ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದ ಸಂತ್ರಸ್ತ, ‘ಡಾ.ಸೂರಜ್ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಸೂರಜ್ ಹಾಗೂ ಶಿವಕುಮಾರ್ – ಇಬ್ಬರಿಂದಲೂ ಬೆದರಿಕೆ ಇದೆ’ ಎಂದು ದೂರು ದಾಖಲಿಸಿದ್ದರು.
23 ರಂದು ಸೂರಜ್ ಅವರನ್ನು ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದರು. ಸಂತ್ರಸ್ತ ನೀಡಿದ್ದ ದೂರಿನಲ್ಲಿ ಎರಡನೇ ಆರೋಪಿಯಾಗಿದ್ದ ಶಿವಕುಮಾರ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಇದೀಗ ಅವರೇ, ನಗರ ಠಾಣೆಯಲ್ಲಿ ಡಾ.ಸೂರಜ್ ವಿರುದ್ಧ ದೂರು ದಾಖಲಿಸಿದ್ದಾರೆ.
ಶಿವಕುಮಾರ್ ವಿರುದ್ಧ ದೂರು
ಖಾಸಗಿ ಫೈನಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಶಿವಕುಮಾರ್, ಗ್ರಾಹಕರು ಸಾಲದ ವಂತಿಗೆ ನೀಡಲು ಕಟ್ಟಿದ್ದ ₹2,91,916 ದುರ್ಬಳಕೆ ಮಾಡಿಕೊಂಡಿರುವುದಾಗಿ ಅರಕಲಗೂಡು ತಾಲ್ಲೂಕಿನ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 21 ರಂದು ಖಾಸಗಿ ಫೈನಾನ್ಸ್ನ ರಾಮನಾಥಪುರ ಶಾಖೆಯ ಮ್ಯಾನೇಜರ್, ಕೇಶವಮೂರ್ತಿ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.