ಚನ್ನರಾಯಪಟ್ಟಣ: ‘ಮೈಸೂರು, ಚಿಕ್ಕಮಗಳೂರು, ಸುಳ್ಯ, ಕೊಡಗು ನಗರದಲ್ಲಿ ಜನಾಂಗದ ಹಿತದೃಷ್ಠಿಯಿಂದ ಹಾಸ್ಟೆಲ್ ತೆರೆಯಲಾಗುವುದು’ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ,‘ಎರಡನೇ ಸಲ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷನಾಗಿದ್ದೇನೆ. ಮೊದಲ ಅವಧಿಯಲ್ಲಿ ರಾಜ್ಯದ 54 ತಾಲ್ಲೂಕು ಸೇರಿ ಪ್ರತಿ ಜಿಲ್ಲೆಯಲ್ಲಿ ನಡೆಯುವ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವಕ್ಕೆ ಸಂಘದಿಂದ ಅನುದಾನ ನೀಡಲು ತೀರ್ಮಾನಿಸಲಾಗಿತ್ತು. ಮೊದಲ 18 ತಿಂಗಳ ಅವಧಿಯಲ್ಲಿ ಸಂಪನ್ಮೂಲ ಕ್ರೋಢೀಕರಿಸಿ ನಾಲ್ಕು ವಿದ್ಯಾಸಂಸ್ಥೆ ತೆರೆಯಲಾಗಿತ್ತು. ಕಿಮ್ಸ್ನಲ್ಲಿ 100 ಹೆಚ್ಚುವರಿ ವೈದ್ಯ ಸೀಟುಗಳ ಅನುಮೋದನೆಗೆ ಮುಂದಾಗಿದ್ದೇವೆ’ಎಂದರು.
‘ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಂಘಕ್ಕೆ 2 ಎಕರೆ ಜಾಗ ನೀಡಿದ್ದು, ಎಂಜಿನಿಯರಿಂಗ್ ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ. ರಾಜ್ಯಾದ್ಯಂತ ಸಂಘಟನೆಗೆ ಒತ್ತು ನೀಡಲು ಸಂಘಟನಾ ಕಾರ್ಯದರ್ಶಿ ಹುದ್ದೆ ಸೃಷ್ಟಿಸಲಾಗುವುದು’ ಎಂದರು.
‘ಎಲ್ಲಾ ನಿರ್ದೇಶಕರ ಸಹಕಾರದಿಂದ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಲಾಗುವುದು. ಸಂಘವನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು. ಆಯಾ ಸರ್ಕಾರದ ಬೆಂಬಲ, ಸಹಕಾರ ಕೋಲಾಗುವುದು’ ಎಂದು ಹೇಳಿದರು.
ಮುಖಂಡರಾದ ಎಂ.ಬಿ. ತಿಮ್ಮೇಗೌಡ, ಎಚ್.ಎನ್.ನವೀನ್, ಸಿ.ವೈ. ಸತ್ಯನಾರಾಯಣ್, ವಾಸು, ಬೆಳಗಿಹಳ್ಳಿ ಪುಟ್ಟಸ್ವಾಮಿ ಎಂ.ಆರ್ . ಆನಿಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.