ಆಲೂರು: ತಾಲ್ಲೂಕಿನ ವಾಟೆಹೊಳೆ ಜಲಾಶಯ ಭರ್ತಿಯಾಗಿದ್ದು, ಕ್ರೆಸ್ಟ್ ಗೇಟುಗಳ ಮೂಲಕ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ನದಿ ತೀರದ ಗ್ರಾಮಗಳಲ್ಲಿ ವಾಸಿಸುವ ಜನ, ಜಾನುವಾರುಗಳು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ.
ವಾಟೆಹೊಳೆ ಜಲಾನಯನ ಪ್ರದೇಶವಾದ ಬಿಕ್ಕೋಡು ಹೋಬಳಿ ವ್ಯಾಪ್ತಿಯಲ್ಲಿ ನಿರಂತರ ಮಳೆ ಬೀಳುತ್ತಿರುವುದರಿಂದ ಜಲಾಶಯದ ಒಡಲು ಭರ್ತಿಯಾಗಿದೆ. 1.51 ಟಿಎಂಸಿ ಅಡಿ ಸಾಮರ್ಥ್ಯವುಳ್ಳ ಜಲಾಶಯದಲ್ಲಿ ಶುಕ್ರವಾರ ಬೆಳಿಗ್ಗೆ 1.45 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, 6 ಸಾವಿರ ಕ್ಯೂಸೆಕ್ ನೀರಿನ ಒಳಹರಿವಿದೆ. ಅಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಯಗಚಿ ನದಿಗೆ ಬಿಡಲಾಗುತ್ತಿದೆ.
‘ಜಲಾಶಯದ ನೀರು ಯಗಚಿ ನದಿ ಸೇರುವ ಜಾಗದವರೆಗೂ ಕೃಷಿ ಭೂಮಿ ಹೊರತುಪಡಿಸಿ ಯಾವುದೇ ಹಳ್ಳಿಗಳಿಲ್ಲ. ಕೃಷಿ ಚಟುವಟಿಕೆಗೆ ಅಳವಡಿಸಿಕೊಂಡಿರುವ ನೀರೆತ್ತುವ ಪಂಪು ಮತ್ತು ಮೋಟಾರುಗಳು ನೀರಿನಲ್ಲಿ ಮುಳುಗಬಹುದು. ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಸೂಚನೆ ನೀಡಲಾಗಿದೆ’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಧರ್ಮರಾಜ್ ತಿಳಿಸಿದ್ದಾರೆ.
1986ರಲ್ಲಿ ನಿರ್ಮಾಣವಾದ ಈ ಜಲಾಶಯ ಈವರೆಗೆ 15 ಬಾರಿ ಭರ್ತಿಯಾಗಿದೆ. 2021ರಲ್ಲಿ ಭರ್ತಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.