ಹಾವೇರಿ: ಮುಂಗಾರು ಆರಂಭದ ಮಳೆಯಿಂದ ಖುಷಿಯಾದ ರೈತರು ಹೊಲಗಳನ್ನು ಹದಗೊಳಿಸಿ ಬಿತ್ತನೆ ಮಾಡಿದ್ದು, ಇದೀಗ ಬೀಜ ಮೊಳಕೆಯೊಡೆಯಲು ಅಗತ್ಯವಿರುವ ಮಳೆಗಾಗಿ ಬಾನಿನತ್ತ ಮುಖ ಮಾಡಿ ಕಾಯುತ್ತಿದ್ದಾರೆ.
ಜಿಲ್ಲೆಯ 3,27,087 ಹೆಕ್ಟೇರ್ ಕೃಷಿ ಭೂಮಿ ಪೈಕಿ, 2,26,130 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಪೂರ್ಣಗೊಂಡಿದೆ.
ಕಳೆದ ಬಾರಿ ಮುಂಗಾರು ಕೈ ಕೊಟ್ಟಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಸಾಕಷ್ಟು ಬೆಳೆ ಹಾನಿ ಉಂಟಾಗಿ, ರೈತರು ಆರ್ಥಿಕವಾಗಿಯೂ ತೊಂದರೆಗೆ ಸಿಲುಕಿದ್ದರು. ಈ ಬಾರಿ ಮುಂಗಾರು ಉತ್ತಮವಾಗಿದ್ದರಿಂದ, ರೈತರು ಸಂಭ್ರಮದಿಂದ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಈ ವಾರ ನಿತ್ಯವೂ ಮೋಡ ಕಾಣಿಸಿಕೊಂಡಿದ್ದು, ಜೋರಾದ ಗಾಳಿಯೂ ಬೀಸುತ್ತಿದೆ. ಆದರೆ, ವಾಡಿಕೆಗೆ ತಕ್ಕಷ್ಟು ಮಳೆಯಾಗಿಲ್ಲ. ಅಲ್ಲಲ್ಲಿ ಮಳೆಯಾದರೂ ತುಂತುರು ಮಾತ್ರ. ನಿಗದಿಯಂತೆ ಮಳೆಯಾದರೆ ಬೆಳೆಗಳಿಗೆ ಅನುಕೂಲವೆಂದು ರೈತರು ಹೇಳುತ್ತಿದ್ದಾರೆ.
‘ಮುಂಗಾರು ಆರಂಭದ ಮಳೆ ಉತ್ತಮವಾಗುತ್ತಿದ್ದಂತೆ, ಬೀಜ ಬಿತ್ತಿದ್ದೇವೆ. ಈಗ ಮೊಳಕೆಯೊಡೆಯುವುದನ್ನು ಕಾಯುತ್ತಿದ್ದೇವೆ. ಹೀಗಾಗಿ, ಮಳೆಯ ಅಗತ್ಯವಿದೆ’ ಎಂದು ಹಾವೇರಿ ತಾಲ್ಲೂಕಿನ ಕೊಡಲ ರೈತ ಧರ್ಮಣ್ಣ ತಿಳಿಸಿದರು.
ಮಳೆ ಬಗ್ಗೆ ಮಾಹಿತಿ ನೀಡಿದ ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ತಜ್ಞರು, ‘ಜಿಲ್ಲೆಯಲ್ಲಿ ಮೇ ತಿಂಗಳಿನಲ್ಲಿ ಸರಾಸರಿ 4 ದಿನಗಳಲ್ಲಿ 8.75 ಸೆಂ.ಮೀ. ಮಳೆ ದಾಖಲಾಗಿದೆ. ಜೂನ್ 12ರ ವರೆಗೆ ಸರಾಸರಿ 7.32 ಸೆಂ.ಮೀ ಮಳೆ ಆಗಿದೆ. ಜೂನ್ 13ರಿಂದ 16ರ ವರೆಗೆ ಉತ್ತಮ ಮಳೆಯಾಗುವ ಮುನ್ಸೂಚನೆ ಇತ್ತು. ಆದರೆ, ಸದ್ಯಕ್ಕೆ ಸರಾಸರಿ 0.18 ಸೆಂ.ಮೀ ಮಾತ್ರ ಅಲ್ಲಲ್ಲಿ ಮಳೆಯಾಗಿದೆ. ಇದನ್ನು ಗಮನಿಸಿದರೆ, ಮಳೆ ಪ್ರಮಾಣ ಕಡಿಮೆ ಆಗಿದೆ’ ಎಂದರು.
‘2011ರಿಂದ 2019ರ ವರೆಗಿನ ಮಳೆಯ ಅಂಕಿ–ಅಂಶ ಗಮನಿಸಿದಾಗ, ಜೂನ್ನಲ್ಲಿ ಸರಾಸರಿ 10.89 ಸೆಂ.ಮೀ ಮಳೆ ಆಗಿದೆ. ಈ ವರ್ಷ ಈಗಾಗಲೇ 7.32 ಸೆಂ.ಮೀ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯೂ ಇದೆ’ ಎಂದು ಹೇಳಿದರು.
ಬಿತ್ತನೆಯಲ್ಲಿ ಶೇ 69.1ರಷ್ಟು ಸಾಧನೆ: ‘ಜಿಲ್ಲೆಯಲ್ಲಿ ಈ ಬಾರಿ ಉತ್ತಮ ರೀತಿಯಲ್ಲಿ ಬಿತ್ತನೆ ಆಗಿದೆ. ಮಳೆ ಆಶ್ರಿತ ಹಾಗೂ ನೀರಾವರಿ ಸೇರಿದಂತೆ ಶೇ 69.1ರಷ್ಟು ಭಾಗದಲ್ಲಿ ಬಿತ್ತನೆ ಪೂರ್ಣಗೊಂಡಿದ್ದು, ಉಳಿದ ಭಾಗದಲ್ಲೂ ಬಿತ್ತನೆ ಆರಂಭವಾಗುವ ಲಕ್ಷಣಗಳಿವೆ’ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ತಿಳಿಸಿದರು.
‘ಪ್ರಮಾಣೀಕೃತ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ಪೂರೈಸಲಾಗಿದೆ. ಮುಂದಿನ ದಿನಗಳಲ್ಲೂ ಅಗತ್ಯ ಬೀಜಗಳು, ಗೊಬ್ಬರ ದಾಸ್ತಾನು ಇದೆ. ತೀರಾ ಅಗತ್ಯವಿದ್ದರೆ, ಪುನಃ ಬೇಡಿಕೆ ಸಲ್ಲಿಸಿ ಬೀಜ ಹಾಗೂ ಗೊಬ್ಬರ ತರಿಸಿಕೊಂಡು ಸಂಗ್ರಹಿಸಿಡಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.