ಹಾನಗಲ್: ನಿರ್ವಹಣೆ ಕೊರತೆಯಿಂದಾಗಿ ತಾಲ್ಲೂಕಿನ ಬಸಾಪೂರ ಏತ ನೀರಾವರಿ ಯೋಜನೆ ಸ್ಥಗಿತಗೊಂಡಿದ್ದು, ನೀರು ಬರುವುದಾಗಿ ಕಾದು ಕುಳಿತಿದ್ದ ರೈತರು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ರೈತರ ಸಮಸ್ಯೆಗೆ ಸ್ಪಂದಿಸಿರುವ ಶಾಸಕ ಶ್ರೀನಿವಾಸ ಮಾನೆ, ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ನೀರು ಹರಿಸಲು ಅಧಿಕಾರಿಗಳಿಗೆ ಜುಲೈ 15ರವರೆಗೆ ಗಡುವು ನೀಡಿದ್ದಾರೆ.
’ಸುತ್ತಲಿನ ಕೆರೆ ಮತ್ತು ಕೃಷಿ ಜಮೀನುಗಳಿಗೆ ನೀರಾವರಿ ಆಸರೆಯಾದ ಬಸಾಪೂರ ಏತ ನೀರಾವರಿ ಯೋಜನೆ ಮರು ಪ್ರಾರಂಭದ ಮೂಲಕ ಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಅಧಿಕಾರಿಗಳಿಗೆ ಹೇಳಿದರು.
’ಹಗಲು ರಾತ್ರಿ ಕೆಲಸ ಮಾಡಿ ಯೋಜನೆಯ ನಾಲ್ಕೂ ಪಂಪ್ಗಳಿಗೂ ಚಾಲನೆ ನೀಡಿ ನೀರು ಹರಿಸಬೇಕು. ನೆಪ ಹೇಳಿ ಕಾಲಹರಣ ಬೇಡ. ಸದ್ಯ ವರದಾ ನದಿಯಲ್ಲಿ ನೀರು ಹರಿಯುತ್ತಿದೆ. ಇದರ ಸದ್ಭಳಕೆಯಾಗಬೇಕು’ ಎಂದರು.
’ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಇಂತಹ ಸಮಯದಲ್ಲಿ ನೀರು ಹರಿಸಿದರೆ ಉಪಯೋಗವಾಗಲಿದೆ. ಭತ್ತದ ನಾಟಿಗೂ ನೀರು ಬಳಕೆಯಾಗಲಿದೆ. ಸದ್ಯಕ್ಕೆ ಎಂಜನಿಯರ್, ಸಿಬ್ಬಂದಿ ತಾತ್ಕಾಲಿಕ ನೇಮಕ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಆಗಬಾರದು’ ಎಂದರು.
’ಕಾಲುವೆ ಎಲ್ಲೆಲ್ಲಿ ಬ್ಲಾಕೇಜ್ ಇದೆ ಎಂಬುದನ್ನು ಈಗಲೇ ಪರಿಶೀಲಿಸಿ ಸರಿಪಡಿಸಿಕೊಳ್ಳಬೇಕು. ನೀರು ಸರಾಗವಾಗಿ ಹಾಯ್ದು ಬರಬೇಕು. ಕೆರೆ-ಕಟ್ಟೆಗಳು ತುಂಬಿಕೊಳ್ಳಬೇಕು’ ಎಂದು ಸೂಚನೆ ನೀಡಿದರು.
ಯೋಜನೆಯ ಎಇಇ ದೇವರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.