ಸವಣೂರು: ‘ತನ್ನ ರಕ್ತವನ್ನು ಇನ್ನೊಬ್ಬರ ಜೀವ ಉಳಿಸಲು ಪ್ರತಿಫಲಾಪೇಕ್ಷೆಯಿಲ್ಲದೆ ಸ್ವಯಂ ಪ್ರೇರಣೆಯಿಂದ ನೀಡುವುದೇ ರಕ್ತದಾನ’ ಎಂದು ಹಾವೇರಿ ಜಿಲ್ಲಾ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ತಿಳಿಸಿದರು.
ಹೊನ್ನಿಕೊಪ್ಪ ಜೀವದಾನಿಗಳ ಬಳಗ, ಶ್ರೀ ಮಹರ್ಷಿ ವಾಲ್ಮೀಕಿ ವೈದ್ಯ ಬಳಗ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ತಾಲ್ಲೂಕಿನ ಹೊನ್ನಿಕೊಪ್ಪ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘ಭೇದ ತೊರದೇ ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯಕ್ಕೆ ಯುವ ಜನತೆ ಮುಂದಾಗುತ್ತಿರುವುದು ಶ್ಲಾಘನಿಯ. ಇಂದಿನ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವವನ್ನು ರಕ್ಷಣೆ ಮಾಡಲು ಮುಂದಾಗಬೇಕು. ಜೊತೆಗೆ ತಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಯ್ದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಾಲತೇಶ ಮಲ್ಲಮ್ಮನವರ ಮಾತನಾಡಿ, ‘ರಕ್ತದಾನ ಮಾಡುವುದರಿಂದ ಯಾವುದೇ ಅಪಾಯವಾಗುವುದಿಲ್ಲ. ಬದಲಾಗಿ ಹೊಸ ರಕ್ತ ಉತ್ಪತ್ತಿಯಾಗಿ ಯಾವುದೇ ರೋಗ ರುಜಿನಗಳಿಲ್ಲದೆ ಆರೋಗ್ಯದಿಂದ ಇರಬಹುದು. ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಯುವಕರು ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಹೆಚ್ಚಾಗಿ ಹಮ್ಮಿಕೊಳ್ಳಬೇಕು’ ಎಂದು ತಿಳಿಸಿದರು.
ಕಡಕೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಎಂ. ವೈ. ಪಟೇಲ್ ಅವರು ರಕ್ತದಾನ ಮಾಡಿದ ಯುವಕರಿಗೆ ಪ್ರಮಾಣ ಪತ್ರ, ನೆನಪಿನ ಕಾಣಿಕೆ ವಿತರಿಸಿದರು.
ಹಿರಿಯ ಪ್ರಯೋಗ ಶಾಲಾ ತಜ್ಞರಾದ ಬಸವರಾಜ ಕಮತದ, ಮಹಾಂತೇಶ ಹೊಳೆಮ್ಮನವರ, ಪ್ರಮುಖರಾದ ಸುನೀಲ ನೆಲೊಗಲ್, ಅಶೋಕ ಅಂಗಡಿ, ಕರಬಸಗೌಡ ಚಿಕ್ಕನಗೌಡ್ರ, ಕೃಷ್ಣ ಸವಣೂರ, ಮಾಂತೇಶ ತಳವಾರ, ರವಿ ಅಂಗಡಿ, ಜಗದೀಶ ವಾಲಿಕಾರ, ಸುಭಾಷ ಮಲ್ಲಮ್ಮನವರ, ಜಗದೀಶ ಅಂಗಡಿ, ವಿನಾಯಕ ಪೂಜಾರ, ದಶವಂತ ಮಲ್ಲಮ್ಮನವರ, ಶಿವು ಪೂಜಾರ, ಸುನೀಲ ಅಂಗಡಿ, ಜಗದೀಶ ಅಂಗಡಿ, ಶಿವಾನಂದ ಮಲ್ಲಮ್ಮನವರ ಪಾಲ್ಗೊಂಡಿದ್ದರು. ಶಿಬಿರದಲ್ಲಿ 16 ಯುವಕರು ರಕ್ತದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.