ಹಾವೇರಿ: ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿದ್ದ ವಾಹನವನ್ನು ಮಾಲೀಕರಿಗೆ ನೀಡಲು ಪೊಲೀಸ್ ಕಾನ್ಸ್ಟೆಬಲ್ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೊ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪೊಲೀಸ್ ಕಾನ್ಸ್ಟೆಬಲ್ ರಮೇಶ ಭಜಂತ್ರಿ ಲಂಚ ಕೇಳಿದವರು. ‘ಸಾಹೇಬ್ರಿಗೆ ₹5 ಸಾವಿರ ಮತ್ತು ನನಗೆ ₹2 ಸಾವಿರ ಕೊಡು’ ಎಂದು ಲಂಚ ಕೇಳಿರುವ ದೃಶ್ಯಾವಳಿ ವಿಡಿಯೊದಲ್ಲಿ ಸೆರೆಯಾಗಿದೆ.
ಕಾನ್ಸ್ಟೆಬಲ್ ಅಮಾನತು:
‘ವಿಡಿಯೊ ದೃಶ್ಯವಾಳಿ ನನ್ನ ಗಮನಕ್ಕೆ ಬಂದಿದೆ. ಪೊಲೀಸ್ ಕಾನ್ಸ್ಟೆಬಲ್ ರಮೇಶ ಭಜಂತ್ರಿಯನ್ನು ಇಲಾಖೆ ವಿಚಾರಣೆ ಕಾಯ್ದಿರಿಸಿ, ಅಮಾನತು ಮಾಡಲಾಗಿದೆ. ಲಂಚ ಪ್ರಕರಣಗಳು ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು’ ಎಂದು ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ.
ಏನಿದು ಘಟನೆ:
ಹುಬ್ಬಳ್ಳಿಯ ಗಣೇಶಪೇಟೆಯ ಮೊಹಮ್ಮದ್ ಇಬ್ರಾಹಿಂ ಮಂಚಿನಕೊಪ್ಪ ಎಂಬುವವರು ತಮ್ಮ ಕಾರನ್ನು ಪರಿಚಿತರಾದ ಇಮ್ರಾನ್ ಎಂಬುವವರಿಗೆ ಕೊಟ್ಟು, ಕಾರಿನ ಕಂತು ಕಟ್ಟಿಕೊಂಡು ಹೋಗು ಎಂದು ತಿಳಿಸಿದ್ದರು.
‘ಇಮ್ರಾನ್ ಅವರಿಂದ ಕಾರು ಪಡೆದಿದ್ದ ಧಾರವಾಡ ಜಿಲ್ಲೆಯ ಹಿರೇನರ್ತಿ ಗ್ರಾಮದ ಹನೀಫ್ 4 ತಿಂಗಳು ಕಾರಿನ ಕಂತು ಕಟ್ಟಿ, 2 ತಿಂಗಳ ಕಂತನ್ನು ಬಾಕಿ ಉಳಿಸಿಕೊಂಡಿದ್ದರು. ಆ ನಂತರ ಫೋನ್ ಸ್ವಿಚ್ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ನಮ್ಮ ಕಾರು ಶಿಗ್ಗಾವಿ ಪಟ್ಟಣದಲ್ಲಿ ಇರುವುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ದೂರು ನೀಡಿದ್ದೆವು’ ಎಂದು ಇಮ್ರಾನ್ ಸಹೋದರ ಜಾವೇದ್ ತಿಳಿಸಿದರು.
‘ಶಿಗ್ಗಾವಿ ಮೂಲದ ವಿಜಯೇಂದ್ರ ಅವರಿಗೆ ಹನೀಫ್ ಅವರು ₹2 ಲಕ್ಷಕ್ಕೆ ಕಾರನ್ನು ಅಡ ಇಟ್ಟಿದ್ದರು. ನಮ್ಮ ದೂರಿನ ಮೇರೆಗೆ ಪೊಲೀಸರು ಕಾರನ್ನು ಠಾಣೆಗೆ ತರಿಸಿದ್ದಾರೆ. ಈ ಕಾರನ್ನು ಬಿಡುಗಡೆ ಮಾಡಲು ₹15 ಸಾವಿರ ಲಂಚಕ್ಕೆ ಪೊಲೀಸ್ ಕಾನ್ಸ್ಟೆಬಲ್ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ₹7 ಸಾವಿರ ಕೊಡಲಾಯಿತು’ ಎಂದು ಜಾವೇದ್ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.