ಅಕ್ಕಿಆಲೂರು: ಬಡವರ ಅಕೌಂಟ್ಗೆ ₹15 ಲಕ್ಷ ಹಾಕ್ತೀವಿ ಅಂದರು, ₹15 ಪೈಸೆನೂ ಹಾಕಲಿಲ್ಲ. 10 ವರ್ಷಗಳಿಂದ ಬರೀ ಸುಳ್ಳು ಹೇಳಿದರು, ಮೋಸ ಮಾಡಿದರು. ಈಗ ಜನ ಬೇಸತ್ತು ಹೋಗಿದ್ದು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ನಿರ್ಣಯಿಸಿದ್ದು, ಮೇ 7ಕ್ಕೆ ಮುಹೂರ್ತ ನಿಗದಿಯಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಇಲ್ಲಿನ ಮುತ್ತಿನಕಂತಿಮಠದ ಆವರಣದಲ್ಲಿ ಶನಿವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 2-3 ದಿನಗಳಲ್ಲಿ ಚುನಾವಣೆಯ ವಾತಾವರಣ ಬದಲು ಮಾಡುವ ಕಾಲ ದೂರವಾಗಿದೆ. ಯಾರು ಹಿತವರು ಎನ್ನುವ ಪ್ರಜ್ಞೆ ಜನರಲ್ಲಿದೆ. ದೇಶದಲ್ಲಿ ಸಂವಿಧಾನ ಉಳಿಯಬೇಕಿದೆ. ಮೋದಿ ಮೋಡಿ ಮ್ಯಾಜಿಕ್ ಮಾಡುವುದಿಲ್ಲ. ಕಾಂಗ್ರೆಸ್ ಅಧಿಕ ಮತಗಳ ಅಂತರದಿಂದ ವಿಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ದೇಶ ಬದಲಾವಣೆ ಬಯಸುತ್ತಿದೆ. ಬಿಜೆಪಿ ಜನವಿರೋಧಿ ಎನ್ನುವುದು ಪ್ರತಿ ಹಂತಗಳಲ್ಲಿಯೂ ಸಹ ಸಾಬೀತಾಗಿದೆ. ಬರೀ ಶ್ರೀಮಂತರ ಏಳಿಗೆ ಬಯಸುವ ನರೇಂದ್ರ ಮೋದಿ ಅವರು ಜನಸಾಮಾನ್ಯರ ಹಿತ ಕಡೆಗಣಿಸಿದ್ದಾರೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿದರು. ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ತಾಪಂ ಮಾಜಿ ಅಧ್ಯಕ್ಷ ಎಲ್.ಕೆ.ಶೇಷಗಿರಿ, ಮಾಜಿ ಸದಸ್ಯ ಮೆಹಬೂಬಅಲಿ ಬ್ಯಾಡಗಿ, ಗ್ರಾಪಂ ಅಧ್ಯಕ್ಷ ಮಕ್ಬೂಲ್ ರುಸ್ತುಂಖಾನವರ, ಮುಖಂಡರಾದ ಯಾಸೀರಖಾನ್ ಪಠಾಣ, ಗೀತಾ ಪೂಜಾರ, ಕೊಟ್ರಪ್ಪ ಕುದರಿಸಿದ್ದನವರ, ಸದಾಶಿವ ಬೆಲ್ಲದ, ಶಿವು ತಳವಾರ ಇದ್ದರು. ಅನೇಕ ಮುಖಂಡರು, ಕಾರ್ಯಕರ್ತರು ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.