ಅಕ್ಕಿಆಲೂರ: ಹಾನಗಲ್ ತಾಲ್ಲೂಕಿನ ಜಕ್ಕನಾಯಕನಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಕ್ಕೆ ಬಣ್ಣ ಹಚ್ಚಲು ಗ್ರಾಮಸ್ಥರ ಸಹಭಾಗಿತ್ವದಲ್ಲಿ ಶಾಸಕ ಶ್ರೀನಿವಾಸ ಮಾನೆ ₹53 ಸಾವಿರ ಮೌಲ್ಯದ ಬಣ್ಣದ ಸಾಮಗ್ರಿಗಳನ್ನು ವಿತರಿಸಿದರು.
ಯುವ ಮುಖಂಡ ಮಾರುತಿ ಇಂಗಳಕಿ ಮಾತನಾಡಿ, ಹಾನಗಲ್ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಶಾಸಕ ಶ್ರೀನಿವಾಸ ಮಾನೆ ಪಣ ತೊಟ್ಟಿದ್ದಾರೆ. ತಾಲ್ಲೂಕಿನಲ್ಲಿ ಯಾವುದೇ ಸರ್ಕಾರಿ ಶಾಲೆಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಅಲ್ಲಿನ ಎಸ್ಡಿಎಂಸಿ ಸದಸ್ಯರು, ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು ಸೇರಿಕೊಂಡು ಸಂಗ್ರಹಿಸುವ ಹಣಕ್ಕೆ ಸರಿಸಮನಾಗಿ ಅಷ್ಟೇ ಹಣವನ್ನು ಮಾನೆ ಅವರೂ ವೈಯಕ್ತಿಕವಾಗಿ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಸರ್ಕಾರದ ಅನುದಾನಕ್ಕೆ ಕಾಯದೇ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್, ಪೀಠೋಪಕರಣ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸಲು, ಬಣ್ಣ ಹಚ್ಚಲು ಸಾಧ್ಯವಾಗುತ್ತಿದೆ. ಈಗಾಗಲೇ ತಾಲ್ಲೂಕಿನ ಹತ್ತಾರು ಶಾಲೆಗಳು ಸೌಲಭ್ಯ ಪಡೆದುಕೊಂಡಿವೆ. ಇದರಿಂದ ಶಾಲೆಗಳಲ್ಲಿ ಕಲಿಕೆಗೆ ಪೂರಕ ವಾತಾವರಣವೂ ಸೃಷ್ಟಿಯಾಗಿ ಮಕ್ಕಳು ಸಂತಸದಿಂದ ಕಲಿಕೆಯಲ್ಲಿ ತೊಡಗುವಂತಾಗಿದೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಸುರೇಶ ವೀರಾಪೂರ, ಸದಸ್ಯ ಈರಣ್ಣ ಓಣಿಮನಿ, ಪ್ರಮುಖರಾದ ದೇವೇಂದ್ರಪ್ಪ ಭೈರಕ್ಕನವರ, ಪೂರ್ವಾಚಾರಿ ಪತ್ತಾರ, ವೀರನಗೌಡ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.