ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದ ಬಸ್ ನಿಲ್ದಾಣ ಪಕ್ಕದಲ್ಲಿ ಖಾಸಗಿ ಬಾಡಿಗೆ ವಾಹನಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸುವಂತೆ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು
ಶನಿವಾರ ಪುರಸಭೆ ಮುಖ್ಯಾಧಿಕಾರಿ ಎ.ಶಿವಪ್ಪ ಅವರಿಗೆ ಮನವಿ ಸಲ್ಲಿಸಿದರು.
ಸುಮಾರು ವರ್ಷಗಳಿಂದ ಬಾಡಿಗೆ ವಾಹನಗಳನ್ನು ಓಡಿಸುವ ಕಾಯಕದಲ್ಲಿ ನಿರತರಾಗಿದ್ದು, ಇದೇ ಉದ್ಯೋಗವನ್ನು ಕಾಯಂ ಮಾಡುತ್ತಿದ್ದೇವೆ. ಆದರೆ ಬಸ್ ನಿಲ್ದಾಣದ ಹತ್ತಿರ ನಿಲುಗಡೆಗೆ ಅಂಗಡಿಕಾರರು ವಿರೋಧಿಸುತ್ತಿದ್ದಾರೆ. ಹೀಗಾಗಿ ನಮ್ಮ ವಾಹನಗಳನ್ನು ಎಲ್ಲಿ ನಿಲುಗಡೆ ಮಾಡಬೇಕು ಎಂಬುವುದು ತಿಳಿಯದಾಗಿದೆ. ಬಸ್ ನಿಲ್ದಾಣ ಬಿಟ್ಟು ದೂರ ನಿಲ್ಲಿಸಿದರೆ ಯಾವುದೇ ಗಿರಾಕಿಗಳು ಬರುವುದಿಲ್ಲ.
ಅದರಿಂದಾಗಿ ಸಂಪೂರ್ಣ ಆರ್ಥಿಕವಾಗಿ ಕುಗ್ಗಿ ಹೋಗಿದ್ದೇವೆ. ಕುಟುಂಬ ನಿರ್ವಹಣೆ ಮಾಡಲು ತುಂಬಾ ತೊಂದರೆಯಾಗುತ್ತಿದೆ. ದಯವಿಟ್ಟು ಬಾಡಿಗೆ ವಾಹನಗಳು ನಿಲುಗಡೆಗೆ ತಾವು ಅವಕಾಶ
ಕಲ್ಪಿಸಬೇಕು. ಸ್ಥಳ ನಿಗದಿಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳಾದ ರಾಘವೇಂದ್ರ ದೊಡ್ಡಮನಿ, ಗಣೇಶ, ದರ್ಶನ ಈಳಿಗೇರ, ಸಂತೋಷ ಕಳಸದ, ಮಾಲತೇಶ ಜಿ.ವೈ, ಕಲ್ಮೇಶ ಮಾನೋಜಿ, ಆನಂದ, ವೀರೇಶ, ಆನಂದ ಕಟ್ಟಿಮನಿ, ಅಜ್ಜಪ್ಪ ಮಾರನಬೀಡ, ಮಲ್ಲು ಪಾಟೀಲ, ಈರಪ್ಪ ಈಳಿಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.