ADVERTISEMENT

ಡೆಂಗಿ ಶಂಕೆ: ತಮ್ಮ ಸಾವು, ಅಣ್ಣನ ಆರೋಗ್ಯ ಗಂಭೀರ

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 16:21 IST
Last Updated 9 ಜೂನ್ 2024, 16:21 IST
ಯಶವಂತ
ಯಶವಂತ   

ಹಾವೇರಿ: ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕ ಯಶವಂತ ಸಿದ್ಧಲಿಂಗೇಶ ಹುಂಡೆಕಾರ (8) ಭಾನುವಾರ ಮೃತಪಟ್ಟಿದ್ದು, ಅವರ ಅಣ್ಣ ದಿನೇಶ್ (10) ಆರೋಗ್ಯ ಸ್ಥಿತಿಯೂ ಗಂಭೀರವಾಗಿದೆ.

ತಾಲ್ಲೂಕಿನ ಸಂಗೂರಿನ ಯಶವಂತ, ಸ್ಥಳೀಯ ಶಾಲೆಯೊಂದರಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದು ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಜೂನ್ 5ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ಹುಬ್ಬಳ್ಳಿ ಕಿಮ್ಸ್‌ಗೆ ಇತ್ತೀಚೆಗೆ ಸ್ಥಳಾಂತರಿಸಲಾಗಿತ್ತು. 

‘ಯಶವಂತ ಡೆಂಗಿ ಜ್ವರದಿಂದ ಬಳಲುತ್ತಿದ್ದನೆಂದು ವೈದ್ಯರು ಹೇಳಿದ್ದರು. ಯಶವಂತ ಆರೋಗ್ಯದಲ್ಲಿ ಭಾನುವಾರ ಏರುಪೇರಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿಯೇ ಆತ ತೀರಿಕೊಂಡಿದ್ದಾನೆ’ ಎಂದು ಸಂಬಂಧಿಕರು ತಿಳಿಸಿದ್ದಾರೆ.

ADVERTISEMENT

‘ಯಶವಂತನ ಅಣ್ಣ ದಿನೇಶ್ ಕೂಡ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ಆರೋಗ್ಯವೂ ಸುಧಾರಿಸಿಲ್ಲ. ಜ್ವರವೂ ಕಡಿಮೆಯಾಗುತ್ತಿಲ್ಲ’ ಎಂದು ಸಂಬಂಧಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಯಶವಂತ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಕಿಮ್ಸ್ ನಿರ್ದೇಶಕ, ’ದಿನೇಶ್ ಡೆಂಗಿಯಿಂದ ಬಳಲುತ್ತಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಆದರೆ, ಯಶವಂತ ಡೆಂಗಿಯಿಂದ ಬಳಲುತ್ತಿದ್ದ ಬಗ್ಗೆ ಪರೀಕ್ಷೆ ವರದಿ ಇನ್ನಷ್ಟೇ ಬರಬೇಕಿದೆ‘ ಎಂದಿದ್ದಾರೆ. 

ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಾಗೂ ವೃದ್ಧರೂ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.