ಹಂಸಭಾವಿ: ಈ ವರ್ಷ ಮಳೆಗಾಲ ಕೈಕೊಟ್ಟಿದ್ದು, ರೈತರು ಕೃಷಿಗೆ ಸಾಲಮಾಡಿ ಹಾಕಿದ ಬಂಡವಾಳ ಸಿಗದಂತಾಗಿದೆ. ಹೀಗಾಗಿ ಸಾಲಕ್ಕೆ ಅಂಜಿ ಯಾರೂ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಗಳಿಗೆ ಮುಂದಾಗಬಾರದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.
ಇಲ್ಲಿಗೆ ಸಮೀಪದ ಅರಳಿಕಟ್ಟಿ ಗ್ರಾಮದಲ್ಲಿ ಮಂಗಳವಾರ ನಡೆದ ರೈತ ಸಂಘದ ನಾಮಫಲಕ ಉದ್ಘಾಟನೆ ಹಾಗೂ ರೈತರಿಗೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸಂಚಾಲಕ ಮಾಲತೇಶ ಪೂಜಾರ ಮಾತನಾಡಿ, ಈ ವರ್ಷ ತೀವ್ರ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು. ಬೆಳೆವಿಮೆ ಹಾಗೂ ಬರಪರಿಹಾರ ವಿತರಣೆಯನ್ನು ಪಾರದರ್ಶಕವಾಗಿ ಮಾಡಬೇಕು. ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ರೈತರಿಗೆ ನೆರವಿಗೆ ಧಾವಿಸಿ ಅವರ ಬದುಕಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಸಚಿವರು ರೈತರ ಬಗ್ಗೆ ಹಗುರವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರೈತರ ಬದುಕು ಎಷ್ಟು ಕಷ್ಟದಿಂದ ಕೂಡಿದೆ ಎಂದು ಅದನ್ನು ಅನುಭವಿಸಿದಾಗಲೇ ಗೊತ್ತಾಗುತ್ತದೆ. ಐಷಾರಾಮಿ ಜೀವನ ನಡೆಸುವ ರಾಜಕೀಯ ನಾಯಕರಿಗೆ ಅದು ಗೊತ್ತಾಗುವುದಿಲ್ಲ ಎಂದು ಹೇಳಿದರು.
ತಾಲ್ಲೂಕು ಘಟಕದ ಧ್ಯಕ್ಷ ಪ್ರಭುಗೌಡ ಪ್ಯಾಟಿ, ಗ್ರಾಮ ಘಟಕದ ಅಧ್ಯಕ್ಷ ಮರಡೆಪ್ಪ ಬಣಕಾರ, ಬ್ಯಾಡಗಿ ಹಸಿರುಸೇನೆ ಅಧ್ಯಕ್ಷ ಗಂಗಣ್ಣ ಎಲಿ, ಜಿಲ್ಲಾ ಸಂಚಾಲಕ ಮಹ್ಮದ್ ಗೌಸ್ ಪಾಟೀಲ್, ಗಂಗನಗೌಡ ಮುದಿಗೌಡ್ರ, ಶಾಂತನಗೌಡ ಪಾಟೀಲ, ಶಂಕರಗೌಡ ಮಕ್ಕಳ್ಳಿ, ಕಿರಣಕುಮಾರ ಗಡಿಗೋಳ ಹಾಗೂ ಗ್ರಾಮ ಘಟಕದ ಸದಸ್ಯರು, ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.