ADVERTISEMENT

ಶೈಕ್ಷಣಿಕ ಅಭಿವೃದ್ಧಿಗೆ ₹2 ಕೋಟಿ ಮೀಸಲು

ಶಾಲಾ ಕೊಠಡಿ ಉದ್ಘಾಟನೆ: ಶಾಸಕ ಪ್ರಕಾಶ ಕೋಳಿವಾಡ ಭರವಸೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 14:15 IST
Last Updated 3 ಜುಲೈ 2024, 14:15 IST
ರಾಣೆಬೆನ್ನೂರು ತಾಲ್ಲೂಕಿನ ಮೇಡ್ಲೇರಿ ಹಾಲುಮತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿವೇಕ ಯೋಜನೆಯಡಿ ನೂತನವಾಗಿ ನಿರ್ಮಿಸಿದ 2 ಶಾಲಾ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆರ್‌. ಶಂಕರ, ಶಾಸಕ ಪ್ರಕಾಶ ಕೋಳಿವಾಡ ಮತ್ತು ನಿವೃತ್ತ ಶಿಕ್ಷಕ ಆರ್‌.ಡಿ.ಹೊಂಬರಡಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.
ರಾಣೆಬೆನ್ನೂರು ತಾಲ್ಲೂಕಿನ ಮೇಡ್ಲೇರಿ ಹಾಲುಮತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿವೇಕ ಯೋಜನೆಯಡಿ ನೂತನವಾಗಿ ನಿರ್ಮಿಸಿದ 2 ಶಾಲಾ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆರ್‌. ಶಂಕರ, ಶಾಸಕ ಪ್ರಕಾಶ ಕೋಳಿವಾಡ ಮತ್ತು ನಿವೃತ್ತ ಶಿಕ್ಷಕ ಆರ್‌.ಡಿ.ಹೊಂಬರಡಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.   

ರಾಣೆಬೆನ್ನೂರು: ‘ಶಾಲಾಭಿಮಾನಿಗಳ ಸಹಕಾರದಿಂದ ಅನೇಕ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿ ಬೆಳಿದಿವೆ. ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಮಾನವನ ಬದುಕು ಹಸನಾಗಿಸಲು ಶಿಕ್ಷಣ ಅತ್ಯಗತ್ಯ’ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ತಾಲ್ಲೂಕಿನ ಮೇಡ್ಲೇರಿ ಗ್ರಾಮದ ಹಾಲುಮತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ 2022- 23ನೇ ಸಾಲಿನಲ್ಲಿ ವಿವೇಕ ಯೋಜನೆಯಡಿ ನಿರ್ಮಿಸಿದ 2 ಕೊಠಡಿಗಳನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘₹2 ಕೋಟಿ ಶಾಸಕರ ಅನುದಾನವನ್ನು ತಾಲ್ಲೂಕಿನ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಈ ಶಾಲೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸ್ಮಾರ್ಟ ಕ್ಲಾಸ್‌, ಕಂಪ್ಯೂಟರ್‌ ಸೌಲಭ್ಯವನ್ನು ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಮಾಜಿ ಸಚಿವ ಆರ್‌.ಶಂಕರ ಮಾತನಾಡಿ, ‘ಈ ಶಾಲೆಗೆ ಜಾಗದ ಕೊರತೆ ಇತ್ತು. ಎಸ್‌ಡಿಎಂಸಿ ಹಾಗೂ ಶಾಲಾ ಶಿಕ್ಷಕರು ಬಂದು ನಮ್ಮ ಶಾಲೆ ಪಕ್ಕದಲ್ಲಿರುವ 10 ಗುಂಟೆ ನಿವೇಶನ ಖರೀದಿಸಲು ₹20 ಲಕ್ಷ ಸೇರಿಸಬೇಕಾಗಿದೆ ವೈಯಕ್ತಿಕವಾಗಿ ₹5 ಲಕ್ಷ ದೇಣಿಗೆ ನೀಡಿದ್ದೇನೆ’ ಎಂದರು.

ಗ್ರಾಮದ ದಿಳ್ಳೆಪ್ಪ ಅಣ್ಣೇರ ಮಾತನಾಡಿ, ‘ದಾನಿಗಳು, ಹಳೇ ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲಿನ ಜನತೆ ಸೇರಿ ₹20 ಲಕ್ಷ ದೇಣಿಗೆ ಸಂಗ್ರಹಿಸಿ 10 ಗುಂಟೆ ಖರೀದಿ ಮಾಡಿ ಶಾಲೆಯ ಅಭಿವೃದ್ಧಿಗೆ ಮುಂದಾಗಿರುವುದು ಶ್ಲಾಘನೀಯ’ ಎಂದರು.

ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಸೀಮಿಕೇರಿ ಮತ್ತು ಬಿಆರ್‌ಪಿ ಗಂಗಪ್ಪ ನಾಯಕ ಮಾತನಾಡಿದರು.

ಶಾಲೆ ಪಕ್ಕದ ನಿವೇಶನ ಖರೀದಿಗೆ ಸಹಕರಿಸಿದ ದಾನಿಗಳನ್ನು, ಮಾಜಿ ಸಚಿವ ಆರ್.ಶಂಕರ್‌ ಮತ್ತು ಶಾಸಕ ಪ್ರಕಾಶ ಕೋಳಿವಾಡ ಅವರನ್ನು, ಈಚೆಗೆ ನಿವೃತ್ತಿ ಹೊಂದಿದ ಇದೇ ಶಾಲೆ ಶಿಕ್ಷಕ ಆರ್.ಡಿ. ಹೊಂಬರಡಿ ಅವರನ್ನು ಎಸ್‌ಡಿಎಂಸಿ ಸದಸ್ಯರು ಸನ್ಮಾನಿಸಿ ಗೌರವಿಸಿದರು.

ಸಿಆರ್‌ಪಿ ಗಿರೀಶ ರಾಠೋಡ, ಬಿಆರ್‌ಸಿ ಎನ್‌. ನಾಗರಾಜ, ಸಿಇಒ ಎಂ.ಸಿ .ಬಲ್ಲೂರ, ಮುಖ್ಯ ಶಿಕ್ಷಕಿ ಎಸ್‌.ಎಲ್‌. ಹರಿಹರ, ಎಸ್‌.ಎಚ್‌. ಮೇಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಸವಣ್ಣೆಮ್ಮ ದಿಳ್ಳೆಪ್ಪ ಮಾಳಗಿ, ಉಪಾಧ್ಯಕ್ಷ ರೂಪ್ಲೆಪ್ಪ ಲಮಾಣಿ, ಎಸ್‌ಡಿಎಂಸಿ ಅಧ್ಯಕ್ಷ ಭರಮಪ್ಪ ಕುದರಿಹಾಳ, ಶೋಭಾ ಬಸಾಪುರ, ದುರುಗಪ್ಪ ಭಜಂತ್ರಿ, ಮಂಜಪ್ಪ ರಾವಳರ, ನಾಗಪ್ಪ ಜಾಗಟಿ ಇದ್ದರು.

ರಾಣೆಬೆನ್ನೂರು ತಾಲ್ಲೂಕಿನ ಮೇಡ್ಲೇರಿ ಹಾಲುಮತ ಸರ್ಕಾರಿ ಶಾಲೆಯ ನೂತನ ಕೊಠಡಿಗಳನ್ನು ಶಾಸಕ ಪ್ರಕಾಶ ಕೋಳಿವಾಡ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.