ಶಿಗ್ಗಾವಿ: ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವದ ಅಂಗವಾಗಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಶುಕ್ರವಾರ ಹಳ್ಳಿಕೇರಿ ಬಸವೇಶ್ವರರ ರಥೋತ್ಸವ ಮತ್ತು ಭಾವಚಿತ್ರದ ಮೆರವಣಿಗೆ ಮತ್ತು ಜೋಡೆತ್ತುಗಳ ಮೆರವಣಿಗೆ ಸಡಗರ ಸಂಭ್ರಮದಿಂದ ಜರುಗಿತು.
ದೇವಸ್ಥಾನದಿಂದ ಆರಂಭಗೊಂಡ ಬಸವೇಶ್ವರರ ರಥೋತ್ಸವದ ಮೆರವಣಿಗೆಗೆ ಅರಳೆಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ನಂತರ ಜೋಡೆತ್ತುಗಳ ಮೆರವಣಿಗೆ, ಡೊಳ್ಳು ಕುಣಿತ, ಝಾಂಜ್ ಮೇಳ, ಭಜನೆ, ಪುರವಂತಿಕೆ, ಮಹಿಳೆಯರ ಪೂರ್ಣಕುಂಭ ಸೇರಿದಂತೆ ವಿವಿಧ ವಾದ್ಯವೈಭವದೊಂದಿಗೆ ಸಾಗಿತು. ಮೆರವಣಿಗೆಯ ಸ್ವಾಗತಕ್ಕಾಗಿ ಪಟ್ಟಣದ ಪ್ರತಿಯೊಂದು ಓಣಿಗಳನ್ನು ಮಾವು, ಬಾಳೆ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಮನೆ, ಮನೆಗಳ ಮುಂದೆ ಬಣ್ಣ,ಬಣ್ಣದ ರಂಗೋಲಿಗಳನ್ನು ಹಾಕಲಾಗಿತು. ಗಣ್ಯರು, ಮಹಿಳೆಯರು, ಮಕ್ಕಳು ಹಣ್ಣು, ಹೂಮಾಲೆಗಳನ್ನು ಹಾಕುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಹರವಿಯವರ ಓಣಿ, ಪಾಟೀಲರ ಓಣಿ, ಸಕ್ರಿಯವರ ಓಣಿ, ಅರಳೆಲೆಮಠದ ಓಣಿ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರದ್ಧಾಭಕ್ತಿಯಿಂದ ಸಾಗಿತು. ನೂತನವಾಗಿ ರಥ ನಿರ್ಮಿಸಿದ ಕಲಾವಿದ ಟವನಂದಿಯ ಸುರೇಶ ಗುಡೆಗಾರ ಸೇರಿದಂತೆ ಸೇವಾಧಾರಿಗಳನ್ನು, ವಿವಿಧ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಳ್ಳಿಕೇರಿ ಬಸಣ್ಣ ದೇವಸ್ಥಾನದ ಅರ್ಚಕ ಈರಯ್ಯ ಪೂಜಾರ, ರುದ್ರಯ್ಯ ಪೂಜಾರ, ಬಸಯ್ಯ ಚಿಕ್ಕಮಠ ಅವರಿಂದ ಮಹಾರುದ್ರಾಭಿಷೇಕ, ಸಹಸ್ರಬಿಲ್ವಾರ್ಚನೆ, ಹೋಮ, ಹವನಗಳು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರುದ್ರಾಣಿ ಬಳಗದ ತಾಯಂದಿರಿಂದ ಸಹಸ್ರನಾಮಾವಳಿ, ರುದ್ರಪಠಣ ಸೇವೆ ನಡೆಯಿತು.
ದೇವಸ್ಥಾನದ ಸೇವಾ ಸಮಿತಿ ಸದಸ್ಯರು, ಸುತ್ತಲಿನ ಗ್ರಾಮಗಳ ಭಕ್ತ ಸಮೂಹ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.