ಹಾನಗಲ್: ತಾಲ್ಲೂಕಿನ ನಾಲ್ಕರ ಕ್ರಾಸ್ ಸಮೀಪ ಜನವರಿಯಲ್ಲಿ ನಡೆದಿದ್ದ ಅನೈತಿಕ ಪೊಲೀಸ್ಗಿರಿ ಮತ್ತು ಸಾಮೂಹಿಕ ಅತ್ಯಾಚಾರ ಘಟನೆಯ ಸಂತ್ರಸ್ತೆಯನ್ನು ಆರೋಪಿಗಳ ಗುರುತಿಸುವ ಪ್ರಕ್ರಿಯೆಯ ತನಿಖೆಗಾಗಿ ಗುರುವಾರ ಹಾನಗಲ್ ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಗಿತ್ತು.
ಮಧ್ಯಾಹ್ನ 1 ಗಂಟೆ ಹೊತ್ತಿಗೆ ಪೊಲೀಸ್ ಠಾಣೆಗೆ ಬಂದ ಸಂತ್ರಸ್ತೆಯೊಂದಿಗೆ ಆಕೆಯ ಪತಿ ಮತ್ತು ಸಹೋದರಿ ಇದ್ದರು. ಮಧ್ಯಾಹ್ನ 4 ಗಂಟೆಗೆ ಸಂತ್ರಸ್ತೆಯನ್ನು ಹಾವೇರಿಯ ಕೆರಿಮತ್ತಿಹಳ್ಳಿಯ ಕಾರಾಗೃಹಕ್ಕೆ ಕರೆದುಕೊಂಡು ಹೋಗಲಾಯಿತು.
ಹಾನಗಲ್ ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿಗಳ ಗುರುತಿಸುವ ಪ್ರಕ್ರಿಯೆಯು ಹಾನಗಲ್ ತಹಶೀಲ್ದಾರ್ ರೇಣುಕಾ ಸಮ್ಮುಖದಲ್ಲಿ ಹಾವೇರಿ ಕಾರಾಗೃಹದಲ್ಲಿ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
‘ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಈತನಕ 19 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಹಾವೇರಿ ಉಪ ಕಾರಾಗೃಹದಲ್ಲಿ ಇದ್ದಾರೆ. ಅತ್ಯಾಚಾರ ಎಸಗಿದ ಆರೋಪಿಗಳನ್ನು ಗುರುತಿಸುವ ಉದ್ದೇಶದಿಂದ ಸಂತ್ರಸ್ತೆಯನ್ನು ಕರೆಸಲಾಗಿತ್ತು’ ಎಂದು ಹೆಚ್ಚುವರಿ ಎಸ್ಪಿ ಗೋಪಾಲ್ ಸಿ. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.