ಹಾವೇರಿ: ಕೆಎಸ್ಆರ್ಟಿಸಿ ಬಸ್ನಲ್ಲಿ ನಿರ್ವಾಹಕಿ ಹಾಗೂ ಪದವಿ ವಿದ್ಯಾರ್ಥಿಯ ನಡುವೆ ಬುಧವಾರ ನಡೆದಿದ್ದ ಜಟಾಪಟಿಗೆ ಸಂಬಂಧಪಟ್ಟಂತೆ ಇಲ್ಲಿಯ ಶಹರ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿವೆ.
‘ಜುಲೈ 10ರಂದು ಬೆಳಿಗ್ಗೆ ನಡೆದಿರುವ ಘಟನೆ ಸಂಬಂಧ ವಿದ್ಯಾರ್ಥಿ ಹಾಗೂ ನಿರ್ವಾಹಕಿ ಪ್ರತ್ಯೇಕ ದೂರು ನೀಡಿದ್ದಾರೆ. ಅದರನ್ವಯ ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಎರಡೂ ಆಯಾಮದಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
ಬೈದಾಡಿ ಕಾಲಿನಿಂದ ಒದ್ದರು: ‘ಇಜಾರಿ ಲಕಮಾಪುರ ನಿಲ್ದಾಣದಲ್ಲಿ ಬಸ್ ಹತ್ತಿದ್ದೆ. ಬಾಗಿಲಿನಿಂದ ಒಳಗೆ ಬರುವಂತೆ ನಿರ್ವಾಹಕಿ ಬೈದಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ನಂತರ, ಕಾಲಿನಿಂದ ನನ್ನ ಪಕ್ಕಡಿಗೆ ಒದ್ದಿದ್ದರು. ಬಸ್ ನಿಲ್ದಾಣಕ್ಕೆ ಹೋದಾಗ ಅಲ್ಲಿಯ ಕೆಲ ಸಿಬ್ಬಂದಿ ಸಹ ನನ್ನ ಮೇಲೆ ಹಲ್ಲೆ ಮಾಡಿದರು. ಜೀವ ಬೆದರಿಕೆಯೊಡ್ಡಿದ್ದರು’ ಎಂದು ದೂರಿನಲ್ಲಿ ವಿದ್ಯಾರ್ಥಿ ತಿಳಿಸಿದ್ದಾರೆ.
ಕರ್ತವ್ಯಕ್ಕೆ ಅಡ್ಡಿ: ‘ಬಾಗಿಲು ಬಳಿ ನಿಲ್ಲಬೇಡಿ. ಬಸ್ಸಿನ ಒಳಗೆ ಬಾ ಎಂದಿದ್ದಕ್ಕೆ ವಿದ್ಯಾರ್ಥಿಯೇ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಸಮವಸ್ತ್ರದ ಕೊರಳಪಟ್ಟಿ ಹಿಡಿದು ಜಗ್ಗಾಡಿ ಜೇಬು ಹರಿದಿದ್ದಾನೆ. ಕೈ ಹಿಡಿದು ತಿರುವಿ ಸಾರ್ವಜನಿಕ ಸ್ಥಳದಲ್ಲಿ ಅವಮಾನ ಮಾಡಿದ್ದಾನೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾನೆ’ ಎಂದು ನಿರ್ವಾಹಕಿ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.