ಹಾನಗಲ್: ‘ನಾನು ಯುವಕನೊಂದಿಗೆ ಸ್ವ–ಇಚ್ಛೆಯಿಂದ ಮದುವೆಯಾಗಿದ್ದೇನೆ. ಪಾಲಕರೊಂದಿಗೆ ತೆರಳುವುದಿಲ್ಲ’ ಎಂದು ಹಾನಗಲ್ ಅಪಹರಣ ಪ್ರಕರಣದ ಯುವತಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ ಬಳಿಕ ಯುವತಿಯ ಪಾಲಕರು ತಮ್ಮ ಮಗಳನ್ನು ನಮಗೆ ಒಪ್ಪಿಸಬೇಕು. ಅವಳು ಅನ್ಯಧರ್ಮದ ಯುವಕನೊಂದಿಗೆ ಮದುವೆಯಾದ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ನ್ಯಾಯಾಧೀಶರ ಮುಂದೆ ಸಿಆರ್ಪಿಸಿ ಸೆಕ್ಷನ್ ‘164’ ಅಡಿಯಲ್ಲಿ ಯುವತಿಯ ಹೇಳಿಕೆ ಮೇರೆಗೆ ಪಟ್ಟಣದಲ್ಲಿ ನಡೆದಿದ್ದ ಅಪಹರಣ ಪ್ರಕರಣ ಗುರುವಾರ ಇತ್ಯರ್ಥಗೊಂಡಿದೆ. ಆದರೆ ಯುವತಿಯ ಮದುವೆ ಅನ್ಯ ಕೋಮಿನ ಯುವಕನೊಂದಿಗೆ ನಡೆದಿದೆ ಎನ್ನಲು ಯಾವುದೇ ದಾಖಲೆಗಳಿಲ್ಲ ಎಂದು ಶುಕ್ರವಾರ ಯುವತಿಯ ಪೋಷಕರು ಪೊಲೀಸರ ಮುಂದೆ ವಾದ ಮಂಡಿಸಿದರು.
ಹಾನಗಲ್ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿಕೊಂಡು ಪ್ರಕರಣ ಇತ್ಯರ್ಥಪಡಿಸಲಾಗಿತ್ತು. ಅದೇ ದಿನ ರಾತ್ರಿ ಯುವತಿಯ ಕುಟುಂಬದವರು ಮತ್ತು ಇಲ್ಲಿನ ಕಲಾಲ ಸಮಾಜದವರು ಠಾಣೆಯಲ್ಲಿ ಜಮಾಯಿಸಿ ಯುವತಿಯನ್ನು ತಂದೆ, ತಾಯಿ ಜತೆಯಲ್ಲಿ ಕಳಿಸಬೇಕು ಎಂದು ಪಟ್ಟು ಹಿಡಿದಿದ್ದರು.
ಶುಕ್ರವಾರ ಹಾನಗಲ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಹೆಚ್ಚುವರಿ ಎಸ್.ಸಿ ಸಿ. ಗೋಪಾಲ, ಡಿವೈಎಸ್ಪಿ ಮಂಜುನಾಥ ಅವರನ್ನು ಭೇಟಿ ಮಾಡಿದ ಯುವತಿಯ ಪಾಲಕರು, ತಮ್ಮ ಮಗಳು ಇನ್ನೂ ಮದುವೆಯಾಗಿಲ್ಲ. ಹೀಗಾಗಿ ಮಗಳನ್ನು ನಮಗೆ ಒಪ್ಪಿಸಬೇಕು ಎಂದು ಮನವಿ ಮಾಡಿದರು.
ಸ್ಥಳೀಯ ಹಿಂದೂ ಸಮಾಜದವರು ಈ ವೇಳೆ ಇದ್ದರು. ಭಾನುವಾರ ಯುವತಿಯನ್ನು ಕರೆಸಿ ವಿಚಾರಿಸುವುದಾಗಿ ಪೊಲೀಸ್ ಅಧಿಕಾರಿಗಳು ಪೋಷಕರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ನ್ಯಾಯಾಧೀಶರ ಎದುರು ಯುವತಿ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದರಿಂದ ಅಪಹರಣ ಪ್ರಕರಣ ಇತ್ಯರ್ಥವಾಗಿದೆ. ಯುವತಿಯನ್ನು ನಾವು ಯುವಕನೊಂದಿಗೆ ಕಳುಹಿಸಿಲ್ಲ.– ಯಲ್ಲಪ್ಪ ಹಿರಗಪ್ಪನವರ ಪಿಎಸ್ಐ ಹಾನಗಲ್ ಠಾಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.