ADVERTISEMENT

ಹಾವೇರಿ | ಆರು ದಂಪತಿಯನ್ನು ಒಂದಾಗಿಸಿದ ಲೋಕ ಅದಾಲತ್

46,752 ಪ್ರಕರಣ ಇತ್ಯರ್ಥ: ₹31.44 ಕೋಟಿ ಮೊತ್ತದಷ್ಟು ರಾಜಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 14:37 IST
Last Updated 15 ಸೆಪ್ಟೆಂಬರ್ 2024, 14:37 IST
ಹಾವೇರಿ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಜರುಗಿತು
ಹಾವೇರಿ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಜರುಗಿತು   

ಹಾವೇರಿ: ಜಿಲ್ಲೆಯ ನ್ಯಾಯಾಲಯಗಳಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಸಲಾಯಿತು.
ಅದಾಲತ್‌ನಲ್ಲಿ ಪಾಲ್ಗೊಂಡಿದ್ದ ಆರು ದಂಪತಿ, ಪರಸ್ಪರ ರಾಜಿ ಆಗುವ ಮೂಲಕ ಮತ್ತೆ ಒಂದಾದರು.

‘ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಇತ್ಯರ್ಥಕ್ಕೆ ಗುರುತಿಸಿದ 57,149 ಪ್ರಕರಣಗಳಲ್ಲಿ 46,752 ಪ್ರಕರಣಗಳು ಇತ್ಯರ್ಥಗೊಂಡಿವೆ. ₹31.44 ಕೋಟಿ ಮೊತ್ತದಷ್ಟು ರಾಜಿಯಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರೂ ಆಗಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಸಿ. ಸದಾನಂದಸ್ವಾಮಿ ತಿಳಿಸಿದರು.

‘ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದ್ದ ಇತ್ಯರ್ಥಕ್ಕೆ ಗುರುತಿಸಿದ್ದ 6,588 ಪ್ರಕರಣಗಳ ಪೈಕಿ 4,555 ಪ್ರಕರಣ ಇತ್ಯರ್ಥಗೊಂಡಿವೆ. ಇದರಲ್ಲಿ ₹20.12 ಕೋಟಿ ಮೊತ್ತದಷ್ಟು ರಾಜಿಯಾಗಿದೆ’ ಎಂದರು.

ADVERTISEMENT

‘ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಇತ್ಯರ್ಥಕ್ಕೆ ಗುರುತಿಸಲಾಗಿದ್ದ 50,561 ಪ್ರಕರಣಗಳಲ್ಲಿ 42,197 ಪ್ರಕರಣಗಳು ಇತ್ಯರ್ಥಗೊಂಡಿವೆ. ಇದರಲ್ಲಿ ₹11.32 ಕೋಟಿ ಮೊತ್ತದಷ್ಟು ರಾಜಿಯಾಗಿದೆ’ ಎಂದು ಹೇಳಿದರು.

‘ವಿವಿಧ ನ್ಯಾಯಾಲಯಗಳಲ್ಲಿದ್ದ ಆರು ಕೌಟುಂಬಿಕ ಪ್ರಕರಣಗಳಲ್ಲಿ ದಂಪತಿಗಳು ರಾಜಿ ಮಾಡಿಕೊಂಡು ಮತ್ತೆ ಒಂದಾಗಿದ್ದಾರೆ. ಹಾವೇರಿ ಮತ್ತು ಶಿಗ್ಗಾವಿ ನ್ಯಾಯಾಲಯದಲ್ಲಿ ತಲಾ ಎರಡು ದಂಪತಿ ರಾಜಿ ಆಗಿದ್ದಾರೆ. ಬ್ಯಾಡಗಿ ಮತ್ತು ಹಾನಗಲ್ ನ್ಯಾಯಾಲಯಗಳಲ್ಲಿ ತಲಾ ಒಂದು ದಂಪತಿ ಮತ್ತೆ ಒಂದಾಗಿದ್ದಾರೆ’ ಎಂದು ತಿಳಿಸಿದರು.

‘ಜಿಲ್ಲಾ ವಕೀಲರ ಸಂಘ, ತಾಲ್ಲೂಕು ವಕೀಲರ ಸಂಘಗಳು, ಹಾವೇರಿ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ಅಭಿಯೋಜನೆ ಇಲಾಖೆ, ಪೊಲೀಸರು, ಇತರೆ ಇಲಾಖೆ ಹಾಗೂ ಕಕ್ಷಿಗಾರರ ಸಹಕಾರದೊಂದಿಗೆ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.