ADVERTISEMENT

ಹಾವೇರಿ: ಅಪರಾಧ ಪತ್ತೆಯಲ್ಲಿ ಶ್ವಾನಗಳ ಪರಾಕ್ರಮ

175 ಪ್ರಕರಣಗಳಲ್ಲಿ ಕರ್ತವ್ಯ ನಿರ್ವಹಿಸಿದ ಝಾನ್ಸಿ ಮತ್ತು ಪಾರು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2023, 6:41 IST
Last Updated 27 ಆಗಸ್ಟ್ 2023, 6:41 IST
ಹಾವೇರಿ ಜಿಲ್ಲಾ ಪೊಲೀಸ್‌ ‘ಶ್ವಾನದಳ’ದಲ್ಲಿರುವ ಝಾನ್ಸಿ, ಕನಕ, ರಾಣಿ ಮತ್ತು ಪಾರು ಶ್ವಾನಗಳೊಂದಿಗೆ ತರಬೇತುದಾರರು   –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ 
ಹಾವೇರಿ ಜಿಲ್ಲಾ ಪೊಲೀಸ್‌ ‘ಶ್ವಾನದಳ’ದಲ್ಲಿರುವ ಝಾನ್ಸಿ, ಕನಕ, ರಾಣಿ ಮತ್ತು ಪಾರು ಶ್ವಾನಗಳೊಂದಿಗೆ ತರಬೇತುದಾರರು   –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ    

ಸಿದ್ದು ಆರ್‌.ಜಿ.ಹಳ್ಳಿ

ಹಾವೇರಿ: ಜಿಲ್ಲೆಯಲ್ಲಿ ನಡೆದ ಕಳ್ಳತನ, ಕೊಲೆ, ಸುಲಿಗೆ, ದರೋಡೆ ಮುಂತಾದ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಹಾವೇರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿ.ಎ.ಆರ್‌) ‘ಶ್ವಾನದಳ’ ಪ್ರಧಾನ ಪಾತ್ರ ವಹಿಸಿದೆ. ಆರೋಪಿಗಳ ಪತ್ತೆಗೆ ಈ ಶ್ವಾನಗಳು ಸಹಕಾರಿಯಾಗಿವೆ. 

ಅಪರಾಧ ಪತ್ತೆ ಹಚ್ಚುವ ಡಾಬರ್‌ಮನ್‌ ತಳಿಯ ಶ್ವಾನಗಳಾದ ‘ಝಾನ್ಸಿ’ ಮತ್ತು ‘ಪಾರು’ ಪ್ರಸಕ್ತ ವರ್ಷ 47 ಪ್ರಕರಣಗಳಲ್ಲಿ ಕರ್ತವ್ಯ ನಿರ್ವಹಿಸಿ, ಆರೋಪಿಗಳ ಸುಳಿವು ನೀಡುವಲ್ಲಿ ಸೈ ಎನಿಸಿಕೊಂಡಿವೆ. ಇದುವರೆಗೆ ಈ ಎರಡೂ ಶ್ವಾನಗಳು ಒಟ್ಟು 175 ಅಪರಾಧ ಪ್ರಕರಣಗಳಲ್ಲಿ ಕಾರ್ಯಾಚರಣೆ ನಡೆಸಿವೆ. 

ADVERTISEMENT

ಸ್ಫೋಟಕ ಅಥವಾ ಬಾಂಬ್‌ ಪತ್ತೆ ಹಚ್ಚುವ ‘ರಾಣಿ’ ಮತ್ತು ‘ಕನಕ’ ಎಂಬ ಲ್ಯಾಬ್ರಡಾರ್‌ ಶ್ವಾನಗಳು ಪ್ರಸ್ತುತ ವರ್ಷ ಹಾವೇರಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ರ‍್ಯಾಲಿ ಸೇರಿದಂತೆ 23 ವಿವಿಐಪಿ ಕಾರ್ಯಕ್ರಮಗಳಲ್ಲಿ ಕರ್ತವ್ಯ ನಿರ್ವಹಿಸಿವೆ. 

ಲಾರಿ ಚಾಲಕನ ಹತ್ಯೆ ಪ್ರಕರಣ:

ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಲಾರಿ ಚಾಲಕನ ಹತ್ಯೆ ಮತ್ತು ದರೋಡೆ ಪ್ರಕರಣವನ್ನು (2023ರ ಜೂನ್‌) 48 ಗಂಟೆಯೊಳೆಗೆ ಭೇದಿಸಿ, ಆರೋಪಿಗಳಿಂದ ₹1.33 ಕೋಟಿ ಮೌಲ್ಯದ 120 ಪ್ರೆಷರ್‌ ವಾಲ್‌ ಮತ್ತು ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಪ್ರಕರಣದಲ್ಲಿ ಭಾಗವಹಿಸಿದ್ದ ‘ಪಾರು’ ಶ್ವಾನ, ಘಟನಾ ಸ್ಥಳದಿಂದ ವಾಸನೆ ಹಿಡಿದುಕೊಂಡು 500 ಮೀಟರ್‌ ದೂರದಲ್ಲಿ ಆರೋಪಿಗಳು ಕುಡಿದು ಬಿಟ್ಟು ಹೋದ ಮದ್ಯದ ಖಾಲಿ ಬಾಟಲಿಗಳನ್ನು ಪತ್ತೆ ಹಚ್ಚಿತ್ತು. ಈ ಸುಳಿವಿನ ಆಧಾರದ ಮೇಲೆ ಐವರು ಆರೋಪಿಗಳನ್ನು ಬಲೆಗೆ ಬೀಳಿಸುವಲ್ಲಿ ಪೊಲೀಸರು ಯಶಸ್ವಿಯಾದರು ಎಂದು ಡಿವೈಎಸ್ಪಿ ಎನ್‌.ಎಂ. ಹನಕನಹಳ್ಳಿ ತಿಳಿಸಿದರು. 

ದಿನಚರಿ:

‘ನಿತ್ಯ ಬೆಳಿಗ್ಗೆ 6.30ಕ್ಕೆ ಶ್ವಾನಗಳ ಆರೋಗ್ಯ ಪರಿಶೀಲಿಸಿದ ನಂತರ ಮೈದಾನದಲ್ಲಿ ನಡಿಗೆ, ಓಟ, ವ್ಯಾಯಾಮ ಮಾಡಿಸುತ್ತೇವೆ. 7.30ಕ್ಕೆ ಕರ್ತವ್ಯ ತರಬೇತಿ ಮತ್ತು ಅಣಕು ಪ್ರದರ್ಶನ ನಡೆಸುತ್ತೇವೆ. ಬೆಳಿಗ್ಗೆ 8.30ಕ್ಕೆ ಕೆನಾಲ್‌ಗಳ ಬಳಿ ವಿಶ್ರಾಂತಿ ನೀಡಿ, ಉಪಾಹಾರ ಕೊಡುತ್ತೇವೆ. ಬೆಳಿಗ್ಗೆ ಹಾಲು, ಮೊಟ್ಟೆ, ಗಂಜಿ (ರಾಗಿ, ರವೆ, ಶ್ಯಾವಿಗೆ, ಸಬ್ಬಕ್ಕಿ) ಮತ್ತು ಶಕ್ತಿವರ್ಧಕ ಸಿರಪ್‌ ಜೊತೆ ಮೊಳಕೆ ಹೆಸರುಕಾಳು ಮತ್ತು ಸೊಪ್ಪು ನೀಡುತ್ತೇವೆ. ಸಂಜೆ 4ಕ್ಕೆ ಮೈದಾನದಲ್ಲಿ ಆಟ, ತರಬೇತಿ ಮುಂದುವರಿಸುತ್ತೇವೆ. ಸಂಜೆ 6ಕ್ಕೆ ಆಹಾರ ಕೊಡುತ್ತೇವೆ’ ಎಂದು ಶ್ವಾನ ತರಬೇತುದಾರರಾದ ಶ್ರೀಕಾಂತ ಕಬ್ಬೂರ, ನಾಗರಾಜ, ಮಾಲತೇಶ ತಿಳಿಸಿದರು. 

ಈ ಪೊಲೀಸ್‌ ಶ್ವಾನಗಳ ಆರೈಕೆ ಮತ್ತು ತರಬೇತಿಗಾಗಿ ನಾಲ್ವರು ಶ್ವಾನ ಪಾಲಕರು ಮತ್ತು ನಾಲ್ವರು ಸಹಾಯಕ ಶ್ವಾನಪಾಲಕರು ಇದ್ದಾರೆ. ಕಾಲಕಾಲಕ್ಕೆ ಈ ನಾಲ್ಕು ಶ್ವಾನಗಳ ಆರೋಗ್ಯ ತಪಾಸಣೆ ಮಾಡಿಸಿ ರೋಗನಿರೋಧಕ ಚುಚ್ಚುಮದ್ದನ್ನು ಹಾಕಿಸಿದ್ದೇವೆ. ಪೊಲೀಸ್‌ ತಂಡಕ್ಕೆ ಈ ಶ್ವಾನಗಳು ‘ಆನೆಬಲ’ವಿದ್ದಂತೆ ಎನ್ನುತ್ತಾರೆ ಶ್ವಾನ ತರಬೇತುದಾರರಾದ ಶಿವರಾಜ ಜಿ.ಎಂ. ಮತ್ತು ಮಂಜುನಾಥ. 

ಕಟೌಟ್‌ ಚಿತ್ರ 
ವಾಸನೆ ಆಧಾರದಲ್ಲಿ ಆರೋಪಿಗಳ ಜಾಡು ಹಿಡಿದು ಸುಳಿವು ನೀಡುವ ಶ್ವಾನಗಳು ಪೊಲೀಸ್‌ ಇಲಾಖೆಯ ಹೆಮ್ಮೆ. ಶ್ವಾನಗಳ ತರಬೇತಿ ಮತ್ತು ಆರೈಕೆಗೆ ಆದ್ಯತೆ ನೀಡಿದ್ದೇವೆ –
ಡಾ.ಶಿವಕುಮಾರ ಗುಣಾರೆ ಎಸ್ಪಿ ಹಾವೇರಿ
ಆರೋಪಿಗಳ ಸುಳಿವು ನೀಡಿದ ಶ್ವಾನ!
‘ಆಡೂರ ಪೊಲೀಸ್‌ ಠಾಣೆ ವ್ಯಾಪ್ತಿಯ ಕೂಸನೂರ ಗ್ರಾಮದಲ್ಲಿ 2023ರ ಜೂನ್‌ ತಿಂಗಳಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣದಲ್ಲಿ ‘ಝಾನ್ಸಿ’ ಶ್ವಾನವು ಆರೋಪಿತರ ಮನೆಯ ಒಳಗೆ ಹೋಗಿ ಸುಳಿವು ನೀಡಿತ್ತು. ಇದರ ಆಧಾರದ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದರು. ಅಷ್ಟೇ ಅಲ್ಲ ಈ ಹಿಂದೆ ನಡೆದಿದ್ದ ಮೂರ್ನಾಲ್ಕು ಮನೆಗಳ್ಳತನ ಪ್ರಕರಣಗಳನ್ನೂ ಭೇದಿಸಲು ಸಾಧ್ಯವಾಯಿತು’ ಎಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇನ್‌ಸ್ಪೆಕ್ಟರ್‌ ಶಂಕರಗೌಡ ಪಾಟೀಲ ತಿಳಿಸಿದರು.  2023ರ ಆಗಸ್ಟ್‌ 1ರಂದು ಹಾನಗಲ್‌ ಪಟ್ಟಣದ ಮಕ್ಬೂಲಿಯಾ ನಗರದ ಮನೆಯೊಂದರ ಬೀಗ ಮುರಿದು ₹1.17 ಲಕ್ಷ ಮೌಲ್ಯದ ನಗದು ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದರು. ‘ಝಾನ್ಸಿ’ ಶ್ವಾನವು ಆರೋಪಿತರ ಮನೆಯವರೆಗೆ ಹೋಗಿ ಪ್ರಮುಖ ಸುಳಿವು ನೀಡಿತ್ತು ಎಂದು ಶ್ವಾನ ತರಬೇತುದಾರರ ಧರ್ಮಗೌಡ ಮತ್ತು ಫಕ್ಕೀರಪ್ಪ ಕಾಮನಹಳ್ಳಿ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.