ಹಾವೇರಿ: ಹಾನಗಲ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಎಸ್.ಐ.ಟಿ ತನಿಖೆಗೆ ವಹಿಸುವಂತೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಶಾಸಕ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಬಿ.ಸಿ. ಪಾಟೀಲ ಸೇರಿದಂತೆ 80ಕ್ಕೂ ಅಧಿಕ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದರು.
ಇಲ್ಲಿನ ಕಾಗಿನೆಲೆ ರಸ್ತೆಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ಬಿಜೆಪಿ ಮುಖಂಡರು ಎಸ್ಪಿ ಕಚೇರಿ ಮುಂಭಾಗ ರಸ್ತೆ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟಿಸಿದರು. ಬಳಿಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ವಶಕ್ಕೆ ಪಡೆದ ಪೊಲೀಸರು ಜೀಪ್ ಹಾಗೂ ಬಸ್ನಲ್ಲಿ ನಗರ ಪೊಲೀಸ್ ಠಾಣೆಯತ್ತ ಕರೆದೊಯ್ದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ‘ರಾಜ್ಯದಲ್ಲಿ ಮಟ್ಕಾ, ಜೂಜು, ಅತ್ಯಾಚಾರ, ಮಹಿಳೆಯರ ಮೇಲೆ ದೌರ್ಜನ್ಯ ಮುಂತಾದ ದುಷ್ಕೃತ್ಯಗಳು ನಿತ್ಯ ನಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದೆಲ್ಲವನ್ನು ನೋಡಿದರೆ, ರಾಜ್ಯ ಸರ್ಕಾರ ಬದುಕಿದೆಯಾ? ಎಂಬ ಅನುಮಾನ ಬರುತ್ತದೆ. ಸಿದ್ದರಾಮಯ್ಯನವರೇ ನಿದ್ದೆಯಿಂದ ಎದ್ದೇಳಿ. ನಿಮ್ಮ ಗೊರಕೆ ಶಬ್ದ ಇಡೀ ರಾಜ್ಯಕ್ಕೆ ಕೇಳಿಸುತ್ತಿದೆ’ ಎಂದು ಛೇಡಿಸಿದರು.
ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ಪಿಎಫ್ಐ ಸೇರಿದಂತೆ ಭಯೋತ್ಪಾದನಾ ಸಂಘಟನೆಗಳ ನಂಟು ಇರುವ ಶಂಕೆ ವ್ಯಕ್ತವಾಗಿದೆ. ಇದು ಬಹಿರಂಗವಾದರೆ, ಸರ್ಕಾರದ ಬಣ್ಣ ಬಯಲಾಗುತ್ತದೆ. ಗೋವಾದಿಂದ ಕರೆ ಮಾಡಿ, ಪೊಲೀಸರ ಮೇಲೆ ಒತ್ತಡ ಹಾಕಿದವರು ಯಾರು ಎಂಬ ಬಗ್ಗೆ ತನಿಖೆಯಾಗಬೇಕು. ಬೆಳಗಾವಿ ಬೆತ್ತಲೆ ಪ್ರಕರಣ ಮತ್ತು ಹಾನಗಲ್ ಅತ್ಯಾಚಾರ ಪ್ರಕರಣಗಳನ್ನು ಮುಚ್ಚಿ ಹಾಕಲು ಯತ್ನಿಸಿದ ಇವರಿಗೆ ‘ನೊಬೆಲ್ ಬಹುಮಾನ’ ಕೊಡಿಸಬೇಕು ಎಂದು ವ್ಯಂಗ್ಯವಾಡಿದರು.
ಸಿಸ್ಟರ್ಗೆ ಅನ್ಯಾಯ– ಡಿಕೆಶಿ ಮಾತನಾಡಲಿ:
ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ರಾವಣ, ದುಶ್ಯಾಸನರಿಗೆ ಉಗ್ರ ಶಿಕ್ಷೆಯಾಗಬೇಕು. ಪೊಲೀಸರು ಆರೋಪಿಗಳಿಗೆ ಬಿರಿಯಾನಿ ಪ್ರಸಾದ ಕೊಡುವುದನ್ನು ಬಿಟ್ಟು, ಠಾಣೆಯೊಳಗೆ ಸರಿಯಾಗಿ ಮಂಗಳಾರತಿ ಎತ್ತಬೇಕು. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾದಾಗ ಆರೋಪಿಗಳನ್ನು ‘ಬ್ರದರ್ಸ್’ ಎಂದು ಡಿ.ಕೆ.ಶಿವಕುಮಾರ್ ಕರೆದರು. ಈಗ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ‘ಸಿಸ್ಟರ್’ ಮೇಲೆ ಅತ್ಯಾಚಾರ ನಡೆದರೂ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
***
ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಅನೈತಿಕ ಪೊಲೀಸ್ಗಿರಿ ನಡೆಯಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯನವರು ಹಿಂದೆ ಗುಡುಗಿದ್ದರು. ಅಲ್ಪಸಂಖ್ಯಾತ ಸಮುದಾಯದ ಅಪರಾಧಿಗಳಿದ್ದರೆ ಅವರ ಶೆಲ್ ಡೌನ್ ಆಗುತ್ತದೆ. ಹೀಗಾಗಿ ಹಾನಗಲ್ ಪ್ರಕರಣದಲ್ಲಿ ಅವರು ಬಾಯಿ ಬಿಡುತ್ತಿಲ್ಲ’ ಎಂದು ಆರೋಪಿಸಿದರು.
ಇಡೀ ಸರ್ಕಾರವೇ ಬೆಳಗಾವಿಯಲ್ಲಿರುವ ಸಂದರ್ಭದಲ್ಲೇ, ದಲಿತ ಮಹಿಳೆಯನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಲಾಯಿತು. ಹಾನಗಲ್ನಲ್ಲಿ ಅಲ್ಪಸಂಖ್ಯಾತ ಮಹಿಳೆ ಮೇಲೆ ‘ಸಾಮೂಹಿಕ ಅತ್ಯಾಚಾರ’ ನಡೆದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಮತೀಯ ಶಕ್ತಿಗಳು ತಲೆ ಎತ್ತಿವೆ. ಅಲ್ಪಸಂಖ್ಯಾತ, ದಲಿತ ಮಹಿಳೆಯರಿಗೂ ರಕ್ಷಣೆ ಇಲ್ಲದಂತಾಗಿದೆ ಎಂದು ಟೀಕಿಸಿದರು.
ಸಂತ್ರಸ್ತೆಗೆ ಚಿಕಿತ್ಸೆ ಸಿಕ್ಕಿಲ್ಲ ಎಂದು ಮಾಧ್ಯಮದವರು ಸಿಎಂ ಅವರನ್ನು ಕೇಳಿದರೆ, ನಮ್ಮ ಶಾಸಕರು ನೋಡಿಕೊಳ್ಳುತ್ತಾರೆ ಎಂದು ಉತ್ತರ ನೀಡಿದ್ದಾರೆ. ಸಂತ್ರಸ್ತೆ ಮೇಲೆ ಪ್ರಭಾವ ಬೀರಿ, ತಮ್ಮ ಹತೋಟಿಯಲ್ಲಿಟ್ಟುಕೊಳ್ಳುವ ಪ್ರಯತ್ನ ಇದಾಗಿದೆ. ದೊಡ್ಡ ಆರೋಗ್ಯ ಇಲಾಖೆ ಇದ್ದರೂ, ಶಾಸಕರಿಗೆ ಹೇಳುತ್ತಾರೆ ಅಂದ್ರೆ, ಕುರಿ ಕಾಯಲು ತೋಳ ನೇಮಿಸಿದಂತಾಯಿತು ಎಂದು ಜರಿದರು.
ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಮತ್ತಷ್ಟು ದಾಖಲೆಗಳನ್ನು ಸಂಗ್ರಹಿಸಿ, ವಿಧಾನಸಭೆ ಅಧಿವೇಶನದಲ್ಲೂ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇವೆ– ಆರ್.ಅಶೋಕ್, ವಿಧಾನಸಭೆ ವಿರೋಧ ಪಕ್ಷದ ನಾಯಕ
ಸಂತ್ರಸ್ತೆಗೆ ಚಿಕಿತ್ಸೆ, ಪರಿಹಾರ ನೀಡಬೇಕು. ಆಡಳಿತ ಪಕ್ಷದ ಕೈಗೊಂಬೆಯಾಗಿರುವ ಪೊಲೀಸರ ಮೇಲೆ ನಮಗೆ ನಂಬಿಕೆಯಿಲ್ಲ. ಎಸ್ಐಟಿ ತನಿಖೆ ನಡೆದರೆ ಮಾತ್ರ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುತ್ತದೆ– ಬಸವರಾಜ ಬೊಮ್ಮಾಯಿ
ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಿ.ಸಿ.ಪಾಟೀಲ್, ಮಾಜಿ ಶಾಸಕರಾದ ಶಿವರಾಜ ಸಜ್ಜನರ್, ವಿರೂಪಾಕ್ಷಪ್ಪ ಬಳ್ಳಾರಿ, ಮುಖಂಡರಾದ ಭೋಜರಾಜ ಕರೂದಿ, ಶೋಭಾ ನಿಸ್ಸೀಮಗೌಡ್ರ, ಗವಿಸಿದ್ದಪ್ಪ ದ್ಯಾಮಣ್ಣನವರ್ ಹಾಗೂ ನೂರಾರು ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.