ADVERTISEMENT

ಶಿಗ್ಗಾವಿ ವಿಧಾನಸಭಾ ಕ್ಷೇತ್ರ | ನಾಮಪತ್ರ ಸಲ್ಲಿಸಿದ ಭರತ್: ಕಣಕ್ಕೆ ಯಾಸೀರ್

* ಕಾಂಗ್ರೆಸ್‌ಗೂ ಬಂಡಾಯದ ಬಿಸಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 23:53 IST
Last Updated 24 ಅಕ್ಟೋಬರ್ 2024, 23:53 IST
ಯಾಸೀರ್‌ ಅಹ್ಮದ್‌ ಖಾನ್ ಪಠಾಣ
ಯಾಸೀರ್‌ ಅಹ್ಮದ್‌ ಖಾನ್ ಪಠಾಣ   

ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಗುರುವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.

ಭರತ್ ಅವರು ತಂದೆ ಬಸವರಾಜ ಬೊಮ್ಮಾಯಿ ಅವರ ಕಾರಿನಲ್ಲೇ ಚುನಾವಣಾಧಿಕಾರಿ ಕಚೇರಿಗೆ ತೆರಳಿದರು. ಸಂಸದ ಬಸವರಾಜ ಬೊಮ್ಮಾಯಿ ಅವರು ನಾಲ್ಕೂ ಅವಧಿಯಲ್ಲೂ ನಾಮಪತ್ರ ಸಲ್ಲಿಕೆಗೆ ತೆರಳುವಾಗ (ಕೆಎ 25 ಎಂಸಿ 2691) ಕಾರು ಬಳಸಿದ್ದರು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಭರತ್ ಅವರು ಶುಕ್ರವಾರ ಮೆರವಣಿಗೆ ಮೂಲಕ ಸಾಗಿ, ಅಧಿಕೃತವಾಗಿ ನಾಮಪತ್ರ ಸಲ್ಲಿಸುವರು. ಬಿಜೆಪಿ ವರಿಷ್ಠ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಚಲವಾದಿ ನಾರಾಯಣಸ್ವಾಮಿ, ಗೋವಿಂದ ಕಾರಜೋಳ, ಬಸನಗೌಡ ಪಾಟೀಲ ಯತ್ನಾಳ ಸೇರಿ ಹಲವರು ಭಾಗವಹಿಸುವರು ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ADVERTISEMENT

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಭರತ್‌ ಬೊಮ್ಮಾಯಿ ಮಾತನಾಡಿ, ‘ತಾಯಿಯವರ ಸೂಚನೆಯಂತೆ ಒಳ್ಳೆಯ ಮುಹೂರ್ತದಲ್ಲಿ ಶಿಗ್ಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವೆ. ತಂದೆ ಬಸವರಾಜ ಬೊಮ್ಮಾಯಿ ಅವರಿಗೆ ಮಾಡಿರುವ ಆಶೀರ್ವಾದವನ್ನು ನನಗೂ ಮಾಡುವಂತೆ ಜನರಿಗೆ ಕೋರುವೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಬಡವರು ಸೇರಿ ಎಲ್ಲರ ಪರ ಕೆಲಸ ಮಾಡುವೆ’ ಎಂದರು.

ಭರತ್‌ ಬೊಮ್ಮಾಯಿ

ಯಾಸೀರ್ ಅಹಮದ್ ಕಾಂಗ್ರೆಸ್ ಅಭ್ಯರ್ಥಿ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಯಾಸೀರ್‌ ಅಹಮದ್ ಖಾನ್ ಪಠಾಣ ಹೆಸರು ಘೋಷಣೆಯಾಗಿದ್ದು ಅವರು ಶುಕ್ರವಾರ ನಾಮಪತ್ರ ಸಲ್ಲಿಸುವರು. 2023ರ ಚುನಾವಣೆ ಸಂದರ್ಭದಲ್ಲೂ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ತಡವಾಗಿತ್ತು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಯಾಸೀರ್‌ ಅಹಮದ್ ಖಾನ್ ಪಠಾಣ ಅವರಿಗೆ ಟಿಕೆಟ್ ನೀಡಲಾಗಿತ್ತು. ಚುನಾವಣೆಯಲ್ಲಿ ಯಾಸೀರ್‌ ಅವರಿಗೆ ಸೋಲಾಗಿತ್ತು. ‘ಕ್ಷೇತ್ರದ ಉಪ ಚುನಾವಣೆಯಲ್ಲೂ ಯಾಸೀರ್ ಅವರಿಗೆ ಟಿಕೆಟ್ ನೀಡಲಾಗಿದೆ. ಕಳೆದ ಚುನಾವಣೆಯಲ್ಲಿ ಸೋತ ಅನುಕಂಪದ ಹಿನ್ನೆಲೆಯಲ್ಲಿ ಯಾಸೀರ್ ಅವರಿಗೆ ಟಿಕೆಟ್ ನೀಡಲಾಗಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ. ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಯಾಸೀರ್ ಅವರು ಬಿ.ಎ ಪದವೀಧರ. ರಿಯಲ್‌ ಎಸ್ಟೇಟ್ ಹಾಗೂ ಹೋಟೆಲ್ ಉದ್ಯಮಿ ಆಗಿದ್ದಾರೆ. ಕಾಂಗ್ರೆಸ್‌ನಲ್ಲಿ ಬಂಡಾಯದ ಬಿಸಿ: ಯಾಸೀರ್‌ಅಹ್ಮದ್ ಖಾನ್ ಪಠಾಣ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಬಂಡಾಯದ ಬಿಸಿ ತಟ್ಟಿದೆ. ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಸೈಯದ್ ಅಜ್ಜಂಪೀರ್ ಖಾದ್ರಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದು ಶಿಗ್ಗಾವಿಯಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದಾರೆ. ‘ನನಗೆ ಟಿಕೆಟ್ ಸಿಗುವ ವಿಶ್ವಾಸವಿತ್ತು. ಆದರೆ ಟಿಕೆಟ್ ಕೈ ತಪ್ಪಿದೆ. ನನಗೆ ಆದ ಅನ್ಯಾಯವನ್ನು ಕಾರ್ಯಕರ್ತರ ಬಳಿ ಹೇಳುವೆ. ಅವರು ಏನು ತೀರ್ಮಾನಿಸುತ್ತಾರೋ ಅದೇ ರೀತಿ ಮುಂದುವರಿಯುವೆ. ಪಕ್ಷೇತರರಾಗಿ ಸ್ಪರ್ಧಿಸಬೇಕೆ ಅಥವಾ ಬೇರೆಯವರಿಗೆ ಬೆಂಬಲಿಸಬೇಕೆ ಎಂಬುದನ್ನು ನಿರ್ಧರಿಸುವೆ’ ಎಂದು ಸೈಯದ್ ಅಜ್ಜಂಪೀರ್ ಖಾದ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

Cut-off box - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.