ರಾಣೆಬೆನ್ನೂರು: ಜಾನಪದ ಕಲೆ ಜಾಗತಿಕವಾಗಿದ್ದು, ಮಾನವೀಯ ಮೌಲ್ಯಗಳನ್ನ ಒತ್ತಿ ಹೇಳುತ್ತವೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರ ಹೇಳಿದರು.
ನಗರದ ಯರೇಕುಪ್ಪಿ ರಸ್ತೆಯ ನೀಲಕಂಠೇಶ್ವರ ದೇವಸ್ಥಾನ ಆವರಣದ ಗಣೇಶ ಉತ್ಸವ ಮಂಟಪದಲ್ಲಿ ಈಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸೌರಭ ಜಾನಪದ ಕಲಾವೇದಿಕೆ ಮತ್ತು ಕಾಕಿ ಜನಸೇವಾ ಸಂಸ್ಥೆ ಆಶ್ರಯದಲ್ಲಿ ದಿ.ದೊಡ್ಡನಾಗಪ್ಪ ತಿರಕಪ್ಪ ಕಾಕಿ ಹಾಗೂ ದಿ.ಸಣ್ಣನಾಗಪ್ಪ ತಿರಕಪ್ಪ ಕಾಕಿ ಪುಣ್ಯಸ್ಮರಣೆ ಅಂಗವಾಗಿ ರಾಜ್ಯಮಟ್ಟದ ಜಾನಪದ ಉತ್ಸವ ಹಾಗೂ ಜೇಸಿವಾಣಿ ಅರಮನೆ ಭೂಮಿ ಪೂಜಾ ಸಮಾರಂಭ, ರಕ್ತದಾನ ಶಿಬಿರ, ದೇಹ ದಾನ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಕಲೆಗಳು ಜನರ ಉಸಿರಾಗಬೇಕು. ನಮ್ಮ ಸಂಸ್ಕೃತಿ ಪರಂಪರೆ ಉಳಿಸಬೇಕಾದರೆ ಸಂಘ ಸಂಸ್ಥೆಗಳು ಸಹಕಾರ ನೀಡಲು ಮುಂದಾಗಬೇಕು. ಕಾಕಿ ಜನ ಸೇವಾ ಸಂಘದವರು ಸಮಾಜ ಸೇವೆಗೆ ಒಂದು ಹೆಜ್ಜೆ ಮುಂದೆ ಇದ್ದಾರೆ ಎಂದರು.
ಸುಗಮ ಸಂಗೀತ, ಜನಪದ ಸಂಗೀತ, ಲಂಬಾಣಿ ನೃತ್ಯ, ಜೋಗತಿ ನೃತ್ಯ, ಭರತನಾಟ್ಯ, ಜನಪದ ಸಮೂಹ ನೃತ್ಯಗಳ ಪರ್ದರ್ಶನ ಗಮನ ಸೆಳೆಯಿತು. ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ಅಧ್ಯಕ್ಷತೆ ವಹಿಸಿದ್ದರು.
ಕುರುಹಿನಶೆಟ್ಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಉಪಾಧ್ಯಕ್ಷ ಶಿವಾನಂದ ಸಾಲಗೇರಿ, ಹನುಮಂತಪ್ಪ ಕಾಕಿ, ಕೆ.ಸಿ.ನಾಗರಜ್ಜಿ, ಸಣ್ಣಹನುಮಂತಪ್ಪ ಕಾಕಿ, ರೂಪಾ ಕಾಕಿ, ವೆಂಕಟೇಶ ಕಾಕಿ, ಪ್ರಭುಲಿಂಗಪ್ಪ ಹಲಗೇರಿ, ಕಲಾವಿದರಾದ ಶಿವಕುಮಾರ ಜಾಧವ, ಪರಶುರಾಮ ಬಣಕಾರ, ರಾಜು ಸೂರ್ವೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.