ಸವಣೂರು: ‘ಅಧಿಕಾರಿಗಳು ಸಾರ್ವಜನಿಕರ, ರೈತರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹರಿಸಲು ಮುಂದಾಗುವುದು ಅಗತ್ಯ. ಅವರನ್ನು ನಿತ್ಯ ಕಚೇರಿಗೆ ಅಲೆದಾಡಿಸುವುದು ತಪ್ಪಿಸಬೇಕು’ ಎಂದು ಜಿಲ್ಲಾಧಿಕಾರಿ ರಘುನಂದನ್ಮೂರ್ತಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.
‘ಕಂದಾಯ ಇಲಾಖೆ, ಸರ್ವೇ, ಪುರಸಭೆ, ಅರಣ್ಯ, ಆರ್ಡಿಪಿಆರ್ ಸೇರಿದಂತೆ ವಿವಿಧ ಇಲಾಖೆಗಳಿಗೆ ಸೇರಿ ಒಟ್ಟು 54 ಅರ್ಜಿ ಸಲ್ಲಿಕೆಯಾಗಿವೆ. ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ರೈತ ಸಂಘಟನೆಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಸಭೆ ಆಯೋಜಿಸಿ ಚರ್ಚೆ ನಡೆಸಿ, ಸಮಸ್ಯೆ ಪರಿಹಾರ ಕೈಗೊಳ್ಳಲಾಗುವದು’ ಎಂದರು.
‘ಬೆಳೆಹಾನಿ, ಬೆಳೆವಿಮೆ, ಪ್ರಕೃತಿ ವಿಕೋಪದಲ್ಲಿ ಉಂಟಾದ ಮನೆಹಾನಿ ಪರಿಹಾರ ವಿತರಣೆ ಕುರಿತು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪುರಸಭೆ ವ್ಯಾಪ್ತಿಯ ಸಮಸ್ಯೆಗಳನ್ನು ಪರಿಹರಿಸಲು ಸ್ಥಳಿಯರು ನೀಡಿರುವ ಅಹವಾಲಿನಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ. ಕೂಡಲೇ ಸ್ಥಳ ಪರಿಶೀಲನೆ ಕೈಗೊಂಡು ವರದಿ ಸಲ್ಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ, ಎಸ್.ಬಿ.ಮುಳ್ಳಳ್ಳಿ, ಉಪ ವಿಭಾಗಾಧಿಕಾರಿ ಮೊಹಮ್ಮದ ಖಿಜರ್, ತಹಶೀಲ್ದಾರ್ ಭರತರಾಜ್ ಕೆ.ಎನ್, ವಿವಿಧ ಇಲಾಖೆ ಜಿಲ್ಲಾ ಹಾಗ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕಾಟಾಚಾರದ ಜನ ಸ್ಪಂದನ:
ರಾಜ್ಯ ಸರ್ಕಾರದ ಆದೇಶದ ಮೇರೆಗೆ ತಾಲ್ಲೂಕು ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಆದರೆ ಜನ ಸಾಮಾನ್ಯರಿಗೆ ಜಿಲ್ಲಾಧಿಕಾರಿಗಳ ತಂಡ ಭೇಟಿ ನೀಡುವ ಮಾಹಿತಿ ತಿಳಿದಿರದ ಕಾರಣ ಕೇವಲ 54 ಅಹವಾಲು ಮಾತ್ರ ಸ್ವೀಕೃತಿಯಾಗಿವೆ. ಅವುಗಳಲ್ಲಿ ರೈತ ಸಂಘಟನೆ ಪದಾಧಿಕಾರಿಗಳ ಅರ್ಜಿ ಹೆಚ್ಚಿನ ಸಂಖ್ಯೆಯಲ್ಲಿವೆ. ಇನ್ನು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಪ್ರೋತ್ಸಾಹಕ್ಕೆ ಕೆಲವರು ಅಹವಾಲು ನೀಡಿದ್ದು ಕಂಡುಬಂದಿತು.
ಪ್ರತಿಭಟನೆಯ ಎಚ್ಚರಿಕೆ: ಜನ ಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಅಹವಾಲುಗಳಲ್ಲಿನ ಸಮಸ್ಯೆಗಳನ್ನು ಬಗೆ ಹರಿಸದಿದ್ದಲ್ಲಿ ಜೂನ್ 30ರ ನಂತರ ಉಪವಾಸ ಸತ್ಯಾಗ್ರಹ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ರೈತ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.