ರಾಣೆಬೆನ್ನೂರು: ಬ್ಯಾಡಗಿಯಿಂದ ಮೆಣಸಿನಕಾಯಿ ಚೀಲಗಳನ್ನು ಹೇರಿಕೊಂಡು ರಾಜಸ್ತಾನಕ್ಕೆ ಹೊರಟಿದ್ದ ಲಾರಿಯನ್ನು ತಾಲ್ಲೂಕಿನ ಕಮದೋಡ ಗ್ರಾಮದ ಬಳಿ ತಡೆದು ದರೋಡೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಡಗಿಯ ಬೀರಪ್ಪ ನಿಂಗಪ್ಪ, ಗುಡ್ಡದಬೇವಿನಹಳ್ಳಿಯ ಶಂಕರ ಈರಪ್ಪ ಗುಬ್ಬಿ, ಹರಿಹರದ ಶಿವರಾಜ ಹನುಮಂತಪ್ಪ, ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಶಿವು ಬೆಳ್ಳೂಡಿ ಬಂಧಿತ ಆರೋಪಿಗಳು.
ಫೆ.29 ರಂದು ₹45 ಲಕ್ಷ ಮೌಲ್ಯದ 448 ಮೆಣಸಿನಕಾಯಿ ಚೀಲಗಳನ್ನು ತುಂಬಿಕೊಂಡು ಬ್ಯಾಡಗಿಯಿಂದ ರಾಜಸ್ಥಾನಕ್ಕೆ ಲಾರಿ ಹೊರಟಿತ್ತು. ಕಮದೋಡ ಗ್ರಾಮದ ಬಳಿ ರಾಜಸ್ಥಾನ ಮೂಲದ ಲಾರಿ ಚಾಲಕನ ಕೈಕಾಲು ಕಟ್ಟಿ ಆತನ ಬಳಿ ಇದ್ದ ₹22 ಸಾವಿರ ಹಣ ಮತ್ತು ಮೊಬೈಲ್ ಕಸಿದುಕೊಂಡು ಮೆಣಸಿನಕಾಯಿ ತುಂಬಿದ ಲಾರಿ ಸಮೇತ ಆರೋಪಿಗಳು ಪರಾರಿಯಾಗಿದ್ದರು.
ಲಾರಿಯನ್ನು ಹರಿಹರ ತಾಲ್ಲೂಕಿನ ಶೇರಾಪುರ ಗ್ರಾಮದ ಬಳಿ ಒಯ್ದು ಅದರಲ್ಲಿನ ₹17 ಲಕ್ಷ ಕಿಮ್ಮತ್ತಿನ 45 ಕ್ವಿಂಟಲ್ ಮೆಣಸಿನಕಾಯಿ ಚೀಲಗಳನ್ನು ತೆಗೆದುಕೊಂಡು ಹೋಗಿದ್ದರು. ಹಲಗೇರಿ ಮತ್ತು ಕುಮಾರಪಟ್ಟಣ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಅವರಿಂದ ಲಾರಿ, ಟಾಟಾಏಸಿ ಗೂಡ್ಸ್ ಗಾಡಿ ಹಾಗೂ ಬೊಲೆರೋ ಪಿಕ್ಅಪ್ ವಾಹನ ಸೇರಿದಂತೆ ಒಟ್ಟು ₹ 87 ಲಕ್ಷ ಮೌಲ್ಯದ ಸ್ವತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್ಪಿ ಗಿರೀಶ ಬೋಜಣ್ಣನವರ ನೇತೃತ್ವದಲ್ಲಿ ರಚನೆ ಮಾಡಿದ ಪೊಲೀಸರ ತಂಡದ ಕುಮಾರಪಟ್ಟಣ ಸಿಪಿಐ ಸಿದ್ದೇಶ, ಹಲಗೇರಿ ಠಾಣೆ ಪರಶುರಾಮ ಲಮಾಣಿ, ಕುಮಾರಪಟ್ಟಣದ ಪಿಎಸ್ಐ ಪ್ರವೀಣಕುಮಾರ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾವಗಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.